ವರುಣನ ಅಬ್ಬರಕ್ಕೆ ತತ್ತರಿಸಿದ ಥಾಣೆ : ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್
Team Udayavani, Aug 4, 2019, 7:15 PM IST
ಮುಂಬಯಿ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಥಾಣೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ನಗರದ ಹೆಚ್ಚಿನ ಎಲ್ಲಾ ಭಾಗಗಳೂ ಜಲಾವೃತಗೊಂಡಿವೆ ಮತ್ತು ಸಾವಿರಾರು ಜನರ ಪಾಡು ಹೆಳತೀರದಾಗಿದೆ. ಇನ್ನು ಮಳೆನೀರು ತುಂಬಿಕೊಂಡು ದ್ವೀಪದಂತಾಗಿರುವ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲು ವಾಯುಪಡೆಯ ಹೆಲಿಕಾಫ್ಟರ್ ಕರೆಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮನವಿ ಮೇರೆಗೆ ಈಗಾಗಲೇ ಜಲಾವೃತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಸೇನಾ ಹೆಲಿಕಾಫ್ಟರ್ ಗಳು ತೆರಳಿವೆ.
ಜಲಾವೃತಗೊಂಡಿರುವ ಹಲವು ಪ್ರದೇಶಗಳಲ್ಲಿ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಜು-ನಂದಕುರಿ ಗ್ರಾಮಕ್ಕೆ ಹೆಲಿಕಾಪ್ಟರ್ ಆಗಮಿಸಿದ್ದು, 35 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಇದರೊಂದಿಗೆ ಮೀಠಿ ನದಿ ಸಮೀಪದ 400ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಮೀಠಿ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಅಪಾಯದ ಸಾಧ್ಯತೆ ಇನ್ನೂ ಕಡಿಮೆಯಾಗಿಲ್ಲ.
ಮುಂಬಯಿ-ಠಾಣೆ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಮೊದಲೇ ಮುನ್ಸೂಚನೆ ನೀಡಿತ್ತು. ಭಾರೀ ಮಳೆ ಮತ್ತು ನೆರೆ ನೀರಿನ ಕಾರಣದಿಂದಾಗಿ ಥಾಣೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.