ಸಿಎಎಯಲ್ಲಿ ವ್ಯಕ್ತಿಯೊಬ್ಬನ ಪೌರತ್ವ ಕಸಿದುಕೊಳ್ಳುವ ಒಂದು ಅಂಶವನ್ನು ತೋರಿಸಿ: ಶಾ ಸವಾಲು
Team Udayavani, Jan 12, 2020, 6:51 PM IST
ಜಬಲ್ಪುರ: ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬಂದ ಎರಡು ದಿನಗಳ ಬಳಿಕ ಈ ಕಾಯ್ದೆಯ ಕುರಿತಾಗಿ ದೇಶದ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿರುವ ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತ್ತು ಈ ಕಾಯ್ದೆಯಲ್ಲಿ ದೇಶದ ಪ್ರಜೆಯ ಪೌರತ್ವವನ್ನು ನಿರಾಕರಿಸುವ ಒಂದೇ ಒಂದು ಅಂಶವನ್ನು ತೆಗೆದು ತೋರಿಸುವಂತೆ ಅವರು ಈ ಎರಡೂ ಪಕ್ಷಗಳ ನಾಯಕರಿಗೆ ಸವಾಲೆಸಿದಿದ್ದಾರೆ.
ನಾವು ಹೇಗೆ ಈ ದೇಶದ ಪ್ರಜೆಗಳಾಗಿದ್ದೇವೆಯೋ ಅದೇ ರೀತಿಯಲ್ಲಿ ಪಾಕಿಸ್ಥಾನ ಹಾಗೂ ದಕ್ಷಿಣ ಏಷ್ಯಾ ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಕ್ರೈಸ್ತ, ಸಿಖ್ ಹಾಗೂ ಬೌದ್ಧರೂ ಸಹ ಈ ದೇಶದಲ್ಲಿ ಸಮಾನ ಹಕ್ಕನ್ನು ಹೊಂದಿದ್ದಾರೆ ಮತ್ತು ಪೌರತ್ವ ಕಾಯ್ದೆ ಅವರಿಗೆ ಈ ಹಕ್ಕುಗಳನ್ನು ಒದಗಿಸಿಕೊಡಲಿದೆ ಎಂಬ ವಿಶ್ವಾಸವನ್ನು ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾಗಿ ಜನರಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಪಕ್ಷವು ದೇಶಾದ್ಯಂತ ನಡೆಸುತ್ತಿರುವ ಜಾಗೃತಿ ಸಮಾವೇಶದ ಅಂಗವಾಗಿ ಮಧ್ಯಪ್ರದೇಶದ ಜಬಲ್ಪುರದ ಗ್ಯಾರಿಸನ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಶಾ ಅವರು ಮಾತನಾಡಿದರು.
‘ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಬಾಬಾ ಅವರಿಗೆ ನನ್ನದೊಂದು ಸವಾಲಿದೆ, ಅದೇನೆಂದರೆ ಸಿಎಎಯಲ್ಲಿ ಈ ದೇಶದ ಪ್ರಜೆಗಳ ಪೌರತ್ವವನ್ನು ಕಸಿದುಕೊಳ್ಳಲಿರುವ ಒಂದೇ ಒಂದು ಅಂಶವನ್ನು ಅವರಿಬ್ಬರು ತೋರಿಸಿಕೊಡಬೇಕು’ ಎಂದು ಶಾ ತಮ್ಮ ಭಾಷಣದಲ್ಲಿ ನೇರ ಸವಾಲನ್ನು ಎಸೆದರು.