ಉಗ್ರರ ಹಿಟ್ಲಿಸ್ಟ್ ರೆಡಿ
ಹತ್ತು ಪ್ರಮುಖ ಭಯೋತ್ಪಾದಕರ ಬೇಟೆಗೆ ಅಮಿತ್ ಶಾ ಸಿದ್ಧತೆ
Team Udayavani, Jun 5, 2019, 6:00 AM IST
ನವದೆಹಲಿ: ಒಂದು ವರ್ಷದ ಅವಧಿಯಲ್ಲಿ 101 ಉಗ್ರರನ್ನು ಮಟ್ಟ ಹಾಕಿರುವ ಕೇಂದ್ರ ಸರ್ಕಾರ ಅವರ ಮೇಲೆ ಮತ್ತಷ್ಟು ಪ್ರಹಾರಕ್ಕೆ ಸಿದ್ಧವಾಗಿದೆ. ಅದಕ್ಕೆ ಪೂರಕವಾಗಿ ಹತ್ತು ಮಂದಿ ಕಠೊರ ಉಗ್ರರ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಅದರಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೂ, ಅಶ್ರಫ್ ಮೌಲವಿ, ಲಷ್ಕರ್-ಎ-ತೊಯ್ಬಾ ಸಂಘಟನೆಯ ವಾಸಿಮ್ ಅಹ್ಮದ್ ಅಲಿಯಾಸ್ ಒಸಾಮ ಸೇರಿದ್ದಾರೆ. ಸೇನೆ ನೀಡಿದ ಮಾಹಿತಿ ಆಧಾರದ ಹಿನ್ನೆಲೆಯಲ್ಲಿ ಈ ಹಿಟ್ ಲಿಸ್ಟ್ ಸಿದ್ಧಪಡಿಸಲಾಗಿದೆ. ಜೈಶ್-ಎ-ಮೊಹಮ್ಮದ್, ಅಲ್-ಬದರ್ ಉಗ್ರ ಸಂಘಟನೆಗಳ ಅಗ್ರ ಪಂಕ್ತಿಯ ಭಯೋತ್ಪಾದಕರ ಬೇಟೆಗೆ ವೇದಿಕೆ ಸಜ್ಜಾಗಿದೆ.
ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮೆಹ್ರಾ ಜುದ್ದೀನ್, ಶ್ರೀನಗರ ವ್ಯಾಪ್ತಿಯಲ್ಲಿ ಸಕ್ರಿಯನಾಗಿರುವ ಡಾ.ಸಫೀಯುಲ್ಲಾ ಅಲಿಯಾಸ್ ಸೈಫುಲ್ಲಾ ಮಿರ್, ಪುಲ್ವಾಮಾದಲ್ಲಿ ಸಕ್ರಿಯನಾಗಿರುವ ಹಿಜ್ಬುಲ್ನ ಅಶಾìದ್ ಉಲ್ ಹಕ್, ಜೈಶ್-ಎ-ಮೊಹಮ್ಮದ್ನ ಹಫೀಜ್ ಒಮರ್, ಅಲ್ ಬದರ್ ಸಂಘಟನೆಯ ಜಾವೇದ್ ಮಟ್ಟೂ ಅಲಿಯಾಸ್ ಫೈಸಲ್ ಅಲಿಯಾಸ್ ಶಕೀಬ್ ಅಲಿಯಾಸ್ ಮುಸಬ್ ಪಟ್ಟಿಯಲ್ಲಿದ್ದಾರೆ.
ಶಾಗೆ ವಿವರಣೆ: ಜಮ್ಮು ಮತ್ತು ಕಾಶ್ಮೀರದ ತಾಜಾ ಪರಿಸ್ಥಿತಿಯನ್ನು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ತಿಂಗಳಿಂದ ನಡೆಯಲಿರುವ ಅಮರನಾಥ ಯಾತ್ರೆ ವ್ಯವಸ್ಥೆ ಪರಿಶೀಲನೆ ಹಿನ್ನೆಲೆಯಲ್ಲಿ ಈ ಸಭೆ ನಡೆದಿತ್ತು. ಸೂಕ್ಷ್ಮ ವಲಯ, ಉಗ್ರರು ದಾಳಿ ನಡೆಸುವ ಸ್ಥಳ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಶಾಗೆ ಮಾಹಿತಿ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಅಮಿತ್ ಶಾ ಶೀಘ್ರದಲ್ಲಿಯೇ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೂಲಗಳ ಪ್ರಕಾರ ಅಮಿತ್ ಶಾ ಖುದ್ದಾಗಿ ಕಾಶ್ಮೀರ ನೀತಿಗಳ ಬಗ್ಗೆ ಸಮಗ್ರ ಪರಿಶೀಲನೆಗೆ ಮುಂದಾಗಿದ್ದಾರೆ.
ಮೂವರು ಪ್ರತ್ಯೇಕತಾವಾದಿಗಳು ಎನ್ಐಎ ವಶಕ್ಕೆ
ಉಗ್ರರಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು-ಕಾಶ್ಮೀರದ ಮೂವರು ಪ್ರತ್ಯೇಕತಾವಾದಿಗಳನ್ನು 10 ದಿನಗಳ ಕಾಲ ಎನ್ಐಎ ವಶಕ್ಕೊಪ್ಪಿಸಿ ದೆಹಲಿಯ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ. 2008ರ ಮುಂಬೈ ದಾಳಿ ರೂವಾರಿ ಜಮಾತ್-ಉದ್-ದಾವಾ(ಜೆಯುಡಿ) ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಕೂಡ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. 2018ರಲ್ಲೇ ಎನ್ಐಎ ಉಗ್ರ ಸಯೀದ್, ಸೈಯಲ್ ಸಲಾಹುದ್ದೀನ್ ಹಾಗೂ ಕಾಶ್ಮೀರದ 10 ಪ್ರತ್ಯೇಕತಾವಾದಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಮಂಗಳವಾರ ಪ್ರತ್ಯೇಕತಾವಾದಿಗಳಾದ ಮಸ್ರತ್ ಆಲಂ, ಆಸಿಯಾ ಅಂದ್ರಬಿ ಮತ್ತು ಶಬೀರ್ ಶಾನನ್ನು ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಅವರನ್ನು 10 ದಿನ ಎನ್ಐಎ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಕಾಶ್ಮೀರದಲ್ಲಿ ಕ್ಷೇತ್ರ ಪುನರ್ವಿಂಗಡಣೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಮುನ್ನ ಕ್ಷೇತ್ರಗಳ ಪುನರ್ ವಿಂಗಡಣೆ ನಡೆಸುವ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ. ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಗೃಹ ಸಚಿವ ಅಮಿತ್ ಶಾ, ಕೇಂದ್ರ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರ ನಡುವಿನ ಸಭೆಯಲ್ಲಿÉ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಜಮ್ಮು ಭಾಗದಲ್ಲಿ ಶೇ.62.55ರಷ್ಟು ಹಿಂದೂಗಳು ಇದ್ದಾರೆ. ಹೀಗಾಗಿ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಗಳನ್ನು ರಚಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ನಡೆದಲ್ಲಿ ಕಣಿವೆ ರಾಜ್ಯದ ವಿಧಾನಸಭೆಯ ಚಿತ್ರಣ ಬದಲಾಗಲಿದೆ. ಜತೆಗೆ ಹಿಂದೂ ಒಬ್ಬರು ಸಿಎಂ ಆಗುವ ಸಾಧ್ಯತೆ ಇದೆ. ಕಾಶ್ಮೀರ ವಲಯಕ್ಕೆ ಹೋಲಿಕೆ ಮಾಡಿದರೆ ಸದ್ಯ ವಿಧಾನಸಭಾ ಕ್ಷೇತ್ರಗಳು ಜಮ್ಮುವಿನಲ್ಲಿ ಕಡಿಮೆ. ಶೇಖ್ ಅಬ್ದುಲ್ಲಾ ಸರ್ಕಾರ ಅಧಿಕಾರದಲ್ಲಿದ್ದಾಗ 43 ಸ್ಥಾನಗಳು ಕಾಶ್ಮೀರಕ್ಕೆ, 30 ಜಮ್ಮುವಿಗೆ, 2 ಲಡಾಖ್ಗೆ ಎಂದು ನಿಗದಿಮಾಡಲಾಗಿತ್ತು. ಇದೇ ವೇಳೆ ಅಮರನಾಥ ಯಾತ್ರೆ ಮುಕ್ತಾಯದ ಬಳಿಕ ಚುನಾವಣೆ ಘೋಷಣೆ ಮಾಡಲಾಗುತ್ತದೆಂದು ಆಯೋಗ ತಿಳಿಸಿದೆ.2026ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪ್ರಯತ್ನ ತಡೆ ಹಿಡಿದ ಕ್ರಮವನ್ನು ಸುಪ್ರೀಂಕೋರ್ಟ್ ತಡೆಹಿಡಿದಿದೆ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.