ಅತ್ಯಾಚಾರಿಗಳನ್ನು ಕ್ಷಮಿಸುವಂತೆ ವಕೀಲೆ ಇಂದಿರಾ ಜೈಸಿಂಗ್ ಕೋರಿಕೆ:ನಿರ್ಭಯಾ ಹೆತ್ತವರ ಆಕ್ರೋಶ
Team Udayavani, Jan 19, 2020, 6:45 AM IST
ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ದಿನಗಣನೆ ಶುರುವಾಗಿರುವಂತೆಯೇ ಸುಪ್ರೀಂ ಕೋರ್ಟ್ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮಾಡಿರುವ ಟ್ವೀಟ್ವೊಂದು ವಿವಾದಕ್ಕೆ ಕಾರಣವಾಗಿದೆ.
ಅಪರಾಧಿಗಳಿಗೆ ಕ್ಷಮೆ ನೀಡುವಂತೆ ಜೈಸಿಂಗ್ ಅವರು ನಿರ್ಭಯಾ ತಾಯಿಗೆ ಸಲಹೆ ನೀಡಿದ್ದು, ಇದಕ್ಕೆ ನಿರ್ಭಯಾ ಹೆತ್ತವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ವರು ಅಪರಾಧಿಗಳನ್ನೂ ಫೆ. 1ರಂದು ಬೆಳಗ್ಗೆ 6 ಗಂಟೆಗೆ ನೇಣುಗಂಬಕ್ಕೇರಿಸುವಂತೆ ದಿಲ್ಲಿಯ ನ್ಯಾಯಾಲಯವು ಶುಕ್ರವಾರ ಡೆತ್ ವಾರಂಟ್ ಹೊರಡಿಸಿತ್ತು. ಇದಾದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ವಕೀಲೆ ಇಂದಿರಾ ಜೈಸಿಂಗ್, “ನಿರ್ಭಯಾಳ ತಾಯಿಯ ನೋವು ನನಗೆ ಅರ್ಥವಾಗು ತ್ತದೆ. ಆದರೆ, ರಾಜೀವ್ಗಾಂಧಿ ಹಂತಕಿ ನಳಿನಿಯನ್ನು ಸೋನಿಯಾ ಗಾಂಧಿ ಕ್ಷಮಿಸಿದಂತೆಯೇ, ನೀವೂ ಕೂಡ ಅತ್ಯಾಚಾರಿಗಳನ್ನು ಕ್ಷಮಿಸಿಬಿಡಿ.
ನಳಿನಿಯನ್ನು ಗಲ್ಲಿಗೇರಿಸುವುದು ನನಗೆ ಇಷ್ಟವಿಲ್ಲ ಎಂದು ಸೋನಿಯಾ ಹೇಳಿದ್ದರು. ಅದನ್ನೇ ನೀವೂ ಪಾಲಿಸಿ, ನಿರ್ಭಯಾ ಹಂತಕರಿಗೆ ಕ್ಷಮೆ ನೀಡಿ. ನಾವು ನಿಮ್ಮೊಂದಿಗಿದ್ದೇವೆ. ಆದರೆ ನಾವು ಗಲ್ಲುಶಿಕ್ಷೆಯನ್ನು ವಿರೋಧಿಸುತ್ತೇವೆ’ ಎಂದು ಬರೆದಿದ್ದರು.
ರಾಜೀವ್ ಹಂತಕಿ ನಳಿನಿಗೂ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆದರೆ, ಸೋನಿಯಾ ಅವರ ಮಧ್ಯಪ್ರವೇಶದ ಬಳಿಕ, ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು.
ನನಗೆ ಹೇಳಲು ನೀವ್ಯಾರು?: ವಕೀಲೆ ಇಂದಿರಾ ಜೈಸಿಂಗ್ ಅವರ ಟ್ವೀಟ್ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ ಆಶಾ ದೇವಿ, “ಇಡೀ ದೇಶವೇ ನನ್ನ ಮಗಳ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಕಾಯು ತ್ತಿರುವಾಗ, ನನಗೆ ಇಂಥದ್ದೊಂದು ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಅವರಿಗೆಷ್ಟು ಧೈರ್ಯ? ಇಷ್ಟು ದಿನದಲ್ಲಿ ಒಂದು ದಿನವೂ ನನ್ನ ಯೋಗಕ್ಷೇಮವನ್ನು ವಿಚಾರಿಸದ ಅವರು, ಈಗ ಅತ್ಯಾಚಾರಿಗಳ ಪರ ಮಾತನಾಡುತ್ತಾರೆ. ಇಂಥವರು ರೇಪಿಸ್ಟ್ಗಳನ್ನು ಬೆಂಬಲಿಸಿಯೇ ಬದುಕು ಸಾಗಿಸುವವರು. ಇಂಥವರಿಂದಾಗಿಯೇ ಅತ್ಯಾಚಾರದಂಥ ಪ್ರಕರಣಗಳು ಕೊನೆಯಾಗುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.
20ರಂದು ವಿಚಾರಣೆ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಸಲ್ಲಿಸಿರುವ ಅರ್ಜಿಯನ್ನು 20ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ. ಪ್ರಕರಣ ನಡೆದಾಗ ತಾನು ಅಪ್ರಾಪ್ತ ವಯಸ್ಸಿನವನಾಗಿದ್ದೆ. ಹಾಗಾಗಿ ಆ ನಿಟ್ಟಿನಲ್ಲಿ ವಿಚಾರಣೆಗೊಳಪಡಿಸಬೇಕು ಎಂದು ಗುಪ್ತಾ ಅರ್ಜಿ ಸಲ್ಲಿಸಿದ್ದಾನೆ.
ಅಷ್ಟೊಂದು ಹೃದಯ ವೈಶಾಲ್ಯತೆ ನಮಗಿಲ್ಲ
ಜೈಸಿಂಗ್ ಸಲಹೆಗೆ ನಿರ್ಭಯಾ ತಂದೆ ಕೂಡ ಪ್ರತಿಕ್ರಿಯಿಸಿದ್ದು, “ನನ್ನ ಮಗಳನ್ನು ಅತ್ಯಾಚಾರ ಮಾಡಿ, ಕೊಂದವರನ್ನು ಕ್ಷಮಿಸಬೇಕು ಎಂದು ಹೇಳಲು ಇಂದಿರಾ ಜೈಸಿಂಗ್ ಅವರಿಗೆ ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ರಾಜೀವ್ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿರಬಹುದು. ಆದರೆ, ನಿರ್ಭಯಾ ಹಂತಕರನ್ನು ಕ್ಷಮಿಸಲು ನಾವು ಸೋನಿಯಾರಷ್ಟು ಹೃದಯ ವೈಶಾಲ್ಯತೆ ಹೊಂದಿಲ್ಲ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ಜೈಸಿಂಗ್ ಕೂಡಲೇ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಗುಡಿಯಾ ರೇಪ್ ಕೇಸ್: ಇಬ್ಬರು ದೋಷಿಗಳೆಂದು ತೀರ್ಪು
ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದ ನಾಲ್ಕೇ ತಿಂಗಳಲ್ಲಿ ದೇಶವನ್ನು ಮತ್ತೂಮ್ಮೆ ಆಘಾತಕ್ಕೆ ದೂಡಿದ್ದ 2013ರ “ಗುಡಿಯಾ’ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳನ್ನು ಶನಿವಾರ ನ್ಯಾಯಾ ಲಯವು ದೋಷಿಗಳೆಂದು ಘೋಷಿಸಿದೆ.
ತನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದ 5 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದ ಇಬ್ಬರು ಪಾಪಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಯತ್ನ ನಡೆಸಿದ್ದರು. ಅಪಹರಣಕ್ಕೀ ಡಾದ 2 ದಿನಗಳ ಬಳಿಕ ಪೂರ್ವ ದಿಲ್ಲಿಯ ಮನೆಯೊಂದರ ನೆಲಮಾಳಿಗೆಯಲ್ಲಿ ಮಗು ಪತ್ತೆಯಾಗಿತ್ತು. ಮಗುವಿನ ಮೇಲೆ ನಡೆದ ಭೀಕರ ಕ್ರೌರ್ಯದಿಂದಾಗಿ, ಆಕೆ 6 ಶಸ್ತ್ರಚಿಕಿತ್ಸೆಗಳನ್ನು ಎದುರಿಸಬೇಕಾಯಿತು.
ಶನಿವಾರ ದಿಲ್ಲಿಯ ಪೋಕೊÕà ಕೋರ್ಟ್, ಇಬ್ಬರು ಆರೋಪಿಗಳಾದ ಮನೋಜ್ ಶಾ ಮತ್ತು ಪ್ರದೀಪ್ ದೋಷಿಗಳು ಎಂದು ತೀರ್ಪಿತ್ತಿದೆ. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಜ.30ರಂದು ನಿಗದಿ ಮಾಡುವುದಾಗಿ ಹೇಳಿದೆ.
“ನಮ್ಮ ಸಮಾಜದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವತೆಯಂತೆ ಪೂಜಿಸಲಾಗು ತ್ತದೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತ ಮಗು, ಅತ್ಯಂತ ನೀಚ ಹಾಗೂ ಅತಿಯಾದ ಕ್ರೌರ್ಯವನ್ನು ಎದುರಿಸಿದೆ. ಈ ಹೀನ ಕೃತ್ಯವು ಇಡೀ ಸಮಾಜದ ಸಾಮೂಹಿಕ ಪ್ರಜ್ಞೆಯನ್ನೇ ನಡುಗಿಸಿದೆ’ ಎಂದು ಕೋರ್ಟ್ ಹೇಳಿದೆ.
ಪತ್ರಕರ್ತರ ಮೇಲೆ ಹಲ್ಲೆ: ಶನಿವಾರ ಕೋರ್ಟ್ಗೆ ಹಾಜರಾಗಿದ್ದ ಅಪರಾಧಿ ಮನೋಜ್ ಶಾ ಕೋರ್ಟ್ ಕೊಠಡಿ ಯೊಳಗೇ ಹಿರಿಯ ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾನೆ. ಕೊಠಡಿಯಿಂದ ಹೊರಗೆ ಕರೆದೊಯ್ಯು ತ್ತಿರುವಾಗಲೇ ಪತ್ರಕರ್ತರ ಮುಖದ ಮೇಲೆ ಆತ ಹೊಡೆದಿದ್ದಾನೆ. ಈ ವಿಚಾರವನ್ನು ಹೆಚ್ಚುವರಿ ಸೆಷನ್ಸ್ ಜಡ್ಜ್ ನರೇಶ್ ಕುಮಾರ್ ಮಲ್ಹೋತ್ರಾರ ಗಮನಕ್ಕೆ ತರಲಾಗಿದೆ.