ಶುದ್ಧ ಗಂಗೆಯಲ್ಲಿ ದೋಣಿ ವಿಹಾರ ಮಾಡುತ್ತಾ ನಮ್ಮನ್ನೇ ಬೈಯುತ್ತೀರಾ?
Team Udayavani, Mar 19, 2019, 8:51 AM IST
ಲಕ್ನೋ: ಉತ್ತರಪ್ರದೇಶದಲ್ಲಿ ಕೈ-ಕಮಲ ನಾಯಕರ ರಾಜಕೀಯ ಆರೋಪ ಪ್ರತ್ಯಾರೋಪಗಳು ದಿನೇದಿನೇ ಕಾವೇರುತ್ತಿದೆ. ಒಂದೆಡೆ ಕಾಂಗ್ರೆಸ್ ಪಕ್ಷದ ಹೊಸ ಸೆನ್ಸೇಷನ್ ಪ್ರಿಯಾಂಕಾ ವಾಧ್ರಾ ಗಾಂಧಿ ಅವರು ಮೂರು ದಿನಗಳ ‘ಗಂಗಾ ಯಾತ್ರೆ’ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆ ಏನು ಎಂದು ಮತದಾರರಲ್ಲಿ ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿ.ಜೆ.ಪಿ. ಸರಕಾರದ ಸಾಧನೆ ಕೇವಲ ರಿಪೋರ್ಟ್ ಕಾರ್ಡ್ಗಷ್ಟೇ ಸೀಮಿತವಾಗಿದೆ ಎಂದವರು ಟೀಕಿಸಿದ್ದಾರೆ. ’70 ವರ್ಷದಲ್ಲಿ ಅವರೇನು ಮಾಡಿದ್ದಾರೆ’ ಎಂಬ ವಾಕ್ಯ ಈಗ ಹಳಸಲಾಗಿದೆ, ಇದೀಗ ಬಿ.ಜೆ.ಪಿ.ಯವರು ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆಂಬುದನ್ನು ಜನತೆಗೆ ತಿಳಿಸುವ ಸಮಯ ಬಂದಿದೆ’ ಎಂದು ಪ್ರಿಯಾಂಕ ತಮ್ಮ ಯಾತ್ರೆಯ ಸಂದರ್ಭದಲ್ಲಿ ಹೇಳಿದರು.
ಪ್ರಿಯಾಂಕ ಅವರ ಈ ಟೀಕೆಗೆ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಕ್ತ ತಿರುಗೇಟು ನೀಡಿದ್ದಾರೆ. ‘ಪ್ರಿಯಾಂಕಾ ಜೀ ಅವರು ಸ್ವಚ್ಛಗೊಂಡಿರುವ ಗಂಗಾ ನದಿಯಲ್ಲಿ ವಿಹಾರ ಕೈಗೊಂಡಿದ್ದಾರೆ. ಕಳೆದ ನಾಲ್ಕು ತಲೆಮಾರುಗಳು ಮಾಡಲು ಸಾಧ್ಯವಾಗದೇ ಇರುವುದನ್ನು ನಾವು ಸಾಧಿಸಿರುವ ಕಾರಣದಿಂದಲೇ ಅವರು ಇವತ್ತು ಪ್ರಯಾಗ್ ರಾಜ್ ನಿಂದ ವಾರಣಾಸಿಗೆ ಗಂಗಾ ಯಾತ್ರೆಯನ್ನು ನಡೆಸುತ್ತಿದ್ದಾರೆ, ಇದಕ್ಕೆ ಕಾರಣವಾಗಿರುವುದು ಪ್ರಧಾನಿ ಮೋದಿ ಅವರ ‘ನಮಾಮಿ ಗಂಗಾ’ ಯೋಜನೆ ಎಂಬುದನ್ನು ಮರೆಯಬಾರದು’ ಎಂದು ಯೋಗಿ ಅವರು ತಿರುಗೇಟು ನೀಡಿದ್ದಾರೆ. ‘ಸ್ವಾತಂತ್ರ್ಯಾನಂತರ ಉತ್ತರಪ್ರದೇಶವನ್ನು ಕಾಂಗ್ರೆಸ್ ಹಲವು ದಶಕಗಳ ಕಾಲ ಆಳಿದೆ, ಇದಕ್ಕೆ ಪ್ರತಿಯಾಗಿ ಆ ಪಕ್ಷ ಈ ರಾಜ್ಯಕ್ಕಿಟ್ಟ ಹೆಸರೇನು ಗೊತ್ತೆ,? ‘ಬಿಮಾರು ಸ್ಟೇಟ್’ (ಅಸ್ವಸ್ಥ ರಾಜ್ಯ), ಹೀಗಿರುವಾಗ ಸ್ವಚ್ಛ ಗಂಗೆಯಲ್ಲಿ ಯಾತ್ರೆ ಮಾಡುತ್ತಾ ಅದಕ್ಕೆ ಕಾರಣವಾಗಿರುವ ಕೇಂದ್ರ ಸರಕಾರವನ್ನು ಮತ್ತು ಮೋದಿಯನ್ನು ಟೀಕಿಸುವ ನೈತಿಕತೆ ಪ್ರಿಯಾಂಕಾ ಅವರಿಗಿದೆಯೇ’ ಎಂದು ಮುಖ್ಯಮಂತ್ರಿ ಯೋಗಿ ಅವರು ಪ್ರಶ್ನಿಸಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿ.ಜೆ.ಪಿ. ಸರಕಾರಕ್ಕೆ ಇಂದಿಗೆ ಎರಡು ವರ್ಷ ಪೂರ್ತಿಗೊಂಡಿದೆ.