ಕೊಲ್ಲುವುದನ್ನು ನಾನು ಕಲಿತಿಲ್ಲ
ಬೇರ್ ಗ್ರಿಲ್ಸ್ಗೆ ಹೇಳಿದ್ದ ಪ್ರಧಾನಿ ಮೋದಿ
Team Udayavani, Aug 10, 2019, 5:12 AM IST
ನವದೆಹಲಿ: ಡಿಸ್ಕವರಿ ಚಾನೆಲ್ನಲ್ಲಿ ಸೋಮವಾರ ಪ್ರಸಾರವಾಗಲಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ನಡೆಸಿದ ಮಾತುಕತೆಯ ಕೆಲವು ಸನ್ನಿವೇಶಗಳನ್ನು ಡಿಸ್ಕವರಿ ಚಾನೆಲ್ ಪ್ರಕಟಿಸಿದೆ. ಹುಲಿಯಿಂದ ಬಚಾವಾಗಲು ವಿಶೇಷ ಭರ್ಚಿಯೊಂದನ್ನು ಮೋದಿ ಕೈಗೆ ಬೇರ್ ಗ್ರಿಲ್ಸ್ ನೀಡಿದಾಗ, ‘ಒಂದು ಜೀವವನ್ನು ಹತ್ಯೆಗೈಯಬಾರದು ಎಂದು ನಾನು ಬೆಳೆದು ಬಂದ ಪರಿಸರ ನನಗೆ ಹೇಳಿಕೊಟ್ಟಿದೆ. ನೀವು ಹೇಳಿದ್ದೀರಿ ಎಂಬ ಕಾರಣಕ್ಕೆ ನಾನು ಈ ಭರ್ಚಿಯನ್ನು ಕೈಯಲ್ಲಿ ಹಿಡಿದುಕೊಳ್ಳುತ್ತೇನೆ’ ಎಂದು ಮೋದಿ ಹೇಳುತ್ತಾರೆ.
ಅಲ್ಲದೆ, ನಾವು ಈ ವಲಯವನ್ನು ಅಪಾಯಕರ ಪ್ರದೇಶ ಎಂದು ಪರಿಗಣಿಸಬಾರದು. ನಾವು ನಿಸರ್ಗದ ವಿರುದ್ಧ ಹೋದರೆ ಆಗ ಎಲ್ಲವೂ ಅಪಾಯಕರವಾಗಿರುತ್ತದೆ. ಮನುಷ್ಯರೂ ಅಪಾಯಕರವಾಗುತ್ತಾರೆ. ಆದರೆ ನಾವು ನಿಸರ್ಗದೊಂದಿಗೆ ಸಹಕರಿಸಿದರೆ, ನಿಸರ್ಗವೂ ನಮಗೆ ಸಹಕರಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಬಗ್ಗೆಯೂ ಈ ಕಾರ್ಯಕ್ರಮದಲ್ಲಿ ಅವರು ಪ್ರಸ್ತಾಪಿಸಿದ್ದು, ಹೊರಗಿನವರು ನಮ್ಮ ದೇಶವನ್ನು ಸ್ವಚ್ಛಗೊಳಿಸಲಾಗದು. ನಮ್ಮ ದೇಶದ ಜನರೇ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾಮಾಜಿಕ ನೈರ್ಮಲ್ಯದ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕಿದೆ. ನಮ್ಮ ಯೋಜನೆ ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸು ಕಂಡಿದೆ. ನಾವು ಶೀಘ್ರದಲ್ಲೇ ಯಶಸ್ವಿಯಾಗುತ್ತೇವೆ ಎಂದು ನಿರೀಕ್ಷಿಸಿದ್ದೇನೆ ಎಂದು ಮೋದಿ ಹೇಳಿದ್ದಾರೆ.