ಮಾಧ್ಯಮಕ್ಕೆ ಹೆದರುವ ಪ್ರಧಾನಿ ನಾನಾಗಿರಲಿಲ್ಲ: ಡಾ. ಮನಮೋಹನ್ ಸಿಂಗ್
Team Udayavani, Dec 19, 2018, 11:08 AM IST
ಹೊಸದಿಲ್ಲಿ : ‘ನಾನೆಂದೂ ಮಾಧ್ಯಮದೊಂದಿಗೆ ಮಾತನಾಡಲು ಹೆದರುವ ಪ್ರಧಾನಿ ಆಗಿರಲಿಲ್ಲ; ಹಾಗೆಯೇ ನಾನು ಆಕಸ್ಮಿಕ ಪ್ರಧಾನಿಯೂ ಆಗಿರಲಿಲ್ಲ ಮತ್ತು ಆಕಸ್ಮಿಕ ಹಣಕಾಸು ಸಚಿವನೂ ಆಗಿರಲಿಲ್ಲ’ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
‘ನಾನು ಮೌನಿ ಪ್ರಧಾನಿ ಎಂದು ಜನರಾಡಿಕೊಳ್ಳುತ್ತಿದ್ದರು. ನಾನೀಗ ಬರೆದಿರುವ ಕೃತಿ ಚೇಂಜಿಂಗ್ ಇಂಡಿಯಾ ಎಲ್ಲವನ್ನೂ ಹೇಳುತ್ತದೆ. ನಾನು ಮಾಧ್ಯಮದೊಂದಿಗೆ ಮಾತನಾಡಲು ಹೆದರುವ ಪ್ರಧಾನಿ ಆಗಿರಲಿಲ್ಲ. ನಾನು ಕಾಲಕಾಲಕ್ಕೆ ಸುದ್ದಿ ಗೋಷ್ಠಿ ನಡೆಸುತ್ತಿದ್ದೇವೆ. ಪ್ರತೀ ಬಾರಿ ವಿದೇಶ ಪ್ರವಾಸ ಮುಗಿಸಿ ಬಂದಾಗ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದೆ’ ಎಂದು ಡಾ. ಸಿಂಗ್ ಹೇಳಿದರು.
ತಮ್ಮ ಚೇಂಜಿಂಗ್ ಇಂಡಿಯಾ ಕೃತಿ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಕೃತಿಯಲ್ಲಿ ಅವರು ಅರ್ಥಶಾಸ್ತಜ್ಞನಾಗಿ ತನ್ನ ಬದುಕಿನ ವಿವರಗಳನ್ನು ಸಾದರಪಡಿಸಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಉನ್ನತ ಸ್ಥಾನದಲ್ಲಿದ್ದು ಅಧಿಕಾರ ನಿರ್ವಹಿಸಿದ ಹತ್ತು ವರ್ಷಗಳ ವಿವರವನ್ನೂ ಕೂಡ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಡಾ. ಸಿಂಗ್, ‘ಮಾಜಿ ಆರ್ಬಿಐ ಗವರ್ನರ್ ಐ ಜಿ ಪಟೇಲ್ ಅವರು ಹಣಕಾಸು ಸಚಿವ ಪದ ಒಲ್ಲೆನೆಂದ ಕಾರಣಕ್ಕೆ ನಾನು ಹಣಕಾಸು ಸಚಿವನಾಗಬೇಕಾಯಿತು’ ಎಂದು ಹೇಳಿದರು.