ಮಹಾಭಿಯೋಗದಲ್ಲಿ ಸಿಜೆಐಗೆ ಬೆದರಿಕೆ ಒಡ್ಡುವ ಉದ್ದೇಶ :ಅರುಣ್ ಜೇಟ್ಲಿ
Team Udayavani, Apr 24, 2018, 7:15 PM IST
ಹೊಸದಿಲ್ಲಿ : ವಕೀಲ ಸಂಸದರು ವಿಭಿನ್ನ ಹಿತಾಸಕ್ತಿಗಳಿಗೆ ನೆರವಾಗುವ ಉದ್ದೇಶದಿಂದ ನ್ಯಾಯಾಲಯಗಳ ನಡುವಿನ ವಿವಾದಗಳನ್ನು ಸಂಸದೀಯ ಪ್ರಕ್ರಿಯೆಯೊಳಗೆ ಎಳೆದು ತರುವ ಪ್ರವೃತ್ತಿ ಹೊಂದಿರುವುದಕ್ಕೆ ವಿರೋಧ ಪಕ್ಷಗಳ ಮಹಾಭಿಯೋಗದ ತಪ್ಪುಗ್ರಹಿಕೆಯ ಗೊತ್ತುವಳಿಯು ಒಂದು ಜ್ವಲಂತ ಉದಾಹರಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
”ಸಂಸತ್ತು ತನ್ನದೇ ನ್ಯಾಯೋಚಿತ ಪರಿಮಿತಿಯೊಳಗೆ ಪರಮೋಚ್ಚವಾಗಿದೆ. ಅದರ ಪ್ರಕ್ರಿಯೆಯನ್ನು ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸಲಾಗದು. ವಿರೋಧ ಪಕ್ಷಗಳು ಸಿಜೆಐ ವಿರುದ್ಧ ಸಲ್ಲಿಸಿದ ಮಹಾಭಿಯೋಗ ಗೊತ್ತುವಳಿಯು ಅಸಮರ್ಥನೀಯ ನೆಲೆಗಟ್ಟನ್ನು ಹೊಂದಿದ್ದು ಅದು ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಬೆದರಿಕೆ ಒಡ್ಡುವ ಇತರೇ ಉದ್ದೇಶಗಳನ್ನು ಹೊಂದಿದೆ” ಎಂದು ಜೇಟ್ಲಿ ಹೇಳಿದರು.
”ಸಂಸತ್ ಪ್ರಕ್ರಿಯೆಯನ್ನು ಈ ಹಿಂದೆಯೂ ವಿವಿಧ ಬಗೆಯ, ವಿಶೇಷವಾಗಿ ಔದ್ಯಮಿಕ ಹಿತಾಸಕ್ತಿಗಾಗಿ ಸಂಸದರು ದುರುಪಯೋಗಿಸಿಕೊಂಡಿರುವ ಉದಾಹರಣೆಗಳಿವೆ. ಅವುಗಳ ನಗ್ನಸತ್ಯ ಕಾಲಕಾಲದಲ್ಲಿ ಅನಾವರಣಗೊಂಡಿದೆ. ಹಾಲಿ ಸಂದರ್ಭದಲ್ಲಿ ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಬೆದರಿಕೆ ಒಡ್ಡುವ ಉದ್ದೇಶ ಇದ್ದುದು ಕೂಡ ಗೊತ್ತಾಗಿದೆ. ವಕೀಲ ಸಂಸದರಲ್ಲಿ ಕೋರ್ಟ್ಗಳ ನಡುವಿನ ವಿವಾದವನ್ನು ಸಂಸತ್ ಪ್ರಕ್ರಿಯೆಯೊಳಗೆ ಎಳೆದು ತರುವ ಪ್ರವೃತ್ತಿ ಇರುವುದು ಮಹಾಭಿಯೋಗದಲ್ಲಿ ಅಡಕವಾಗಿರುವುದು ಗೊತ್ತಾಗಿದೆ” ಎಂದು ಜೇಟ್ಲಿ ಹೇಳಿದರು.