ಭಾರತ-ಇಸ್ರೇಲ್ ಮಹತ್ವದ ಒಪ್ಪಂದ
Team Udayavani, Jan 16, 2018, 6:00 AM IST
ಹೊಸದಿಲ್ಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ ಭಾರತ ಭೇಟಿಯ ಎರಡನೇ ದಿನವಾದ ಸೋಮವಾರ ಉಭಯ ದೇಶಗಳು ತೈಲ ಹಾಗೂ ನೈಸರ್ಗಿಕ ಅನಿಲ, ರಾಷ್ಟ್ರೀಯ ಭದ್ರತೆ, ಸೈಬರ್ ಭದ್ರತೆ ಸಹಿತ ಒಟ್ಟು 9 ಒಪ್ಪಂದಗಳಿಗೆ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ನೇತೃತ್ವದಲ್ಲಿ ಎರಡೂ ದೇಶಗಳ ಸಂಪುಟ ದರ್ಜೆಯ ಸಚಿವರು, ಅಧಿಕಾರಿಗಳು, ರಾಜ ತಾಂತ್ರಿಕ ಪರಿಣತರು ಭಾಗವಹಿಸಿದ್ದ ಸಭೆಯ ಬಳಿಕ ಈ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ತೈಲ ಹಾಗೂ ನೈಸರ್ಗಿಕ ಅನಿಲ, ರಾಷ್ಟ್ರೀಯ ಭದ್ರತೆ, ಸೈಬರ್ ಭದ್ರತೆ ಮಾತ್ರವಲ್ಲದೆ ಕೃಷಿ, ತಂತ್ರಜ್ಞಾನ ಕ್ಷೇತ್ರ ಗಳಲ್ಲಿ ಪರಸ್ಪರ ಸಹಕಾರ, ಭಾರತೀಯ ಚಿತ್ರರಂಗದಲ್ಲಿ ಇಸ್ರೇಲ್ ಹೂಡಿಕೆ, ಉಭಯ ದೇಶಗಳ ನಡುವಿನ ವಾಯು ಸಾರಿಗೆ ನಿಯಮಗಳ ಪರಿಷ್ಕರಣೆ, ಉಭಯ ದೇಶಗಳ ವಿಮಾನ ನಿಲ್ದಾಣಗಳಲ್ಲಿನ ಶಿಷ್ಟಾಚಾರಗಳಲ್ಲಿ ಬದಲಾವಣೆ, ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಕಾರ್ಯಸೂಚಿ ವಿಷಯಗಳೂ ಒಪ್ಪಂದದಲ್ಲಿ ಸೇರಿವೆ.
ಒಪ್ಪಂದದ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, “ಹೊಸ ಒಪ್ಪಂದ ಉಭಯ
ದೇಶಗಳ ಬಾಂಧವ್ಯದ ಆಧಾರಸ್ತಂಭ ಗಳನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ಹೊಗಳಿದರೆ, ಇಸ್ರೇಲ್ ಪ್ರಧಾನಿ, “ಭಾರತ-ಇಸ್ರೇಲ್ ಬಾಂಧವ್ಯದಲ್ಲಿ ಇವು (ಒಪ್ಪಂದ) ಹೊಸ ಅರುಣೋದಯ’ ಎಂದು ಬಣ್ಣಿಸಿದ್ದಾರೆ.
ಸುಂಕ ರಹಿತ ವಹಿವಾಟು?: ಭಾರತ – ಇಸ್ರೇಲ್ ನಡುವೆ ಉಂಟಾಗಿರುವ ಒಪ್ಪಂದದ ಫಲವಾಗಿ ಉಭಯ ದೇಶಗಳ ನಡುವೆ ಸುಂಕ ರಹಿತ, ಮುಕ್ತ ವ್ಯಾಪಾರ ವಹಿವಾಟು ಸಾಧ್ಯವಾಗ ಬಹುದೆಂದು ಇಸ್ರೇಲ್ನ ಹಣಕಾಸು ಇಲಾಖೆ ವ್ಯಾಪಾರ ಆಯುಕ್ತ ಒಹಾದ್ ಕೊಹೆನ್ ಅಭಿಪ್ರಾಯಪಟ್ಟಿದ್ದಾರೆ.
ಹೂಡಿಕೆಯಲ್ಲಿ ಹೆಚ್ಚಳ: ಹೊಸ ಒಪ್ಪಂದಗಳ ಫಲವಾಗಿ ಭಾರತದಲ್ಲಿ ಇಸ್ರೇಲ್ನ ಹೂಡಿಕೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. 2016- 17ರ ಆರ್ಥಿಕ ವರ್ಷದಲ್ಲಿ ಅಂದಾಜು 31,762 ಕೋಟಿ ರೂ.ಗಳಷ್ಟಿದ್ದು, ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಮೋದಿ ಹಾಡಿ ಹೊಗಳಿದ ನೆತಾನ್ಯಾಹು: ಒಪ್ಪಂದದ ಅನಂತರ ನಡೆಸಲಾದ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಇಸ್ರೇಲ್ ಪ್ರಧಾನಿ ನೆತಾನ್ಯಾಹು, ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ್ದಾರೆ. ಮೋದಿ ಅವರನ್ನು ಕ್ರಾಂತಿಕಾರಿ ನಾಯಕ ಎಂದು ಬಣ್ಣಿ ಸಿದ ಅವರು, “ನೀವು ಭಾರತದಲ್ಲಿ ಹಾಗೂ ಭಾರತ-ಇಸ್ರೇಲ್ ನಡುವಿನ ಬಾಂಧವ್ಯದಲ್ಲಿ ಹೊಸ ಕ್ರಾಂತಿ ತರು ತ್ತಿದ್ದೀರಿ’ ಎಂದರು.
ಅನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ನಮ್ಮ ಬಾಂಧವ್ಯಗಳನ್ನು ನಾವೀಗ ಅಭಿವೃದ್ಧಿ ಪಡಿಸಿದ್ದೇವೆ. ನಮ್ಮ ಹಾದಿಯಲ್ಲಿ ನಾವು ಮತ್ತಷ್ಟು ದೂರ ಮುಂದುವರಿಯ ಬಹುದು’ ಎಂದು ತಿಳಿಸಿದರು. ವಿದೇಶಿ ಹೂಡಿಕೆಗೆ ಹೊಸ ಆಯಾಮಗಳನ್ನು ಕಲ್ಪಿಸಿರುವ ಭಾರತದಲ್ಲಿ ಇಸ್ರೇಲಿ ಕಂಪೆನಿಗಳು ಇನ್ನಷ್ಟು ಸಾಧಿಸಲು ಅವಕಾಶವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ