ಮುಕ್ತ ರಾಜತಾಂತ್ರಿಕ ನೆರವಿಗೆ ಕೋರಿಕೆ
ಜಾಧವ್ಗೆ ರಾಜತಾಂತ್ರಿಕ ನೆರವಿಗೆ ಪಾಕ್ ಷರತ್ತು
Team Udayavani, Aug 3, 2019, 5:43 AM IST
ಹೊಸದಿಲ್ಲಿ: ಪಾಕಿಸ್ಥಾನ ಜೈಲಿನಲ್ಲಿ ರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ಗೆ ರಾಜತಾಂತ್ರಿಕ ನೆರವು ಒದಗಿಸ ಬೇಕು ಎಂದು ಅಂತಾ ರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ್ದರೂ ಪಾಕಿಸ್ಥಾನ ಕ್ಯಾತೆ ತೆಗೆಯುತ್ತಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಪಾಕಿಸ್ಥಾನವು, ಜಾಧವ್ರನ್ನು ರಾಜತಾಂತ್ರಿಕರು ಭೇಟಿ ಮಾಡುವಾಗ ಪಾಕಿಸ್ಥಾನ ಅಧಿಕಾರಿಯೂ ಇರಬೇಕು ಎಂಬ ಷರತ್ತನ್ನು ವಿಧಿಸಿದೆ ಎನ್ನಲಾಗಿದೆ. ಅಲ್ಲದೆ, ಈ ಹಿಂದೆ ಜಾಧವ್ ತಾಯಿ ಮತ್ತು ಕುಟುಂಬ ಸದಸ್ಯರು ಭೇಟಿ ನೀಡಿದಾಗ ಅಳವಡಿಸಿದ್ದಂತೆ ಸಿಸಿಟಿವಿ ಅಳವಡಿಸಬೇಕು ಎಂದೂ ಬೇಡಿಕೆ ಸಲ್ಲಿಸಿದೆ. ಅದರೆ ಇದಕ್ಕೆ ಒಪ್ಪದ ಭಾರತ ವಿಚಕ್ಷಣೆಯಿಂದ ಮುಕ್ತವಾಗಿ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದೆ.
ದೌರ್ಜನ್ಯ ಮತ್ತು ಪ್ರತೀಕಾರದ ಭೀತಿ ಇಲ್ಲದ ಮುಕ್ತವಾದ ಪರಿಸರದಲ್ಲಿ ಜಾಧವ್ ಜತೆ ಸಂಪರ್ಕ ಅವಕಾಶ ಕಲ್ಪಿಸಬೇಕು ಎಂದು ಭಾರತ ಆಗ್ರಹಿಸಿದೆ. ಕೆಲವೇ ದಿನಗಳ ಹಿಂದಷ್ಟೇ ಐಸಿಜೆ ತೀರ್ಪಿನ ಹಿನ್ನೆಲೆ ಯಲ್ಲಿ ಪಾಕಿಸ್ಥಾನ ಈ ನಿರ್ಧಾರ ಕೈಗೊಂಡಿದೆ. ಆದರೆ ಭಾರತದ ಬೇಡಿಕೆಗೆ ಪಾಕಿಸ್ಥಾನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.