ಭುಗಿಲೆದ್ದ ಆಕ್ರೋಶ:ಅತ್ಯಾಚಾರ, ಕೊಲೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ
Team Udayavani, Apr 16, 2018, 6:30 AM IST
ಹೊಸದಿಲ್ಲಿ: ಜಮ್ಮು- ಕಾಶ್ಮೀರದ ಕಥುವಾದಲ್ಲಿ ನಡೆದ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಉತ್ತರಪ್ರದೇಶದ ಉನ್ನಾವ್ನಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಇಡೀ ದೇಶದ ಗಮನ ಸೆಳೆಯಿದ್ದು, ರವಿವಾರ ಬೆಂಗಳೂರು, ದಿಲ್ಲಿ, ಮುಂಬಯಿ, ಗೋವಾ, ಕೇರಳ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ನಲ್ಲಿ ಸಾವಿರಾರು ಮಂದಿ ‘ನಾಟ್ ಇನ್ ಮೈ ನೇಮ್’ ಎಂಬ ಫಲಕಗಳನ್ನು ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬಯಿಯಲ್ಲಿ ನಡೆದ ಮೊಂಬತ್ತಿ ಮೆರವಣಿಗೆಯಲ್ಲಿ ಪ್ರಿಯಾಂಕಾ ಚೋಪ್ರಾ, ಏಕ್ತಾ ಸೇರಿ ಬಾಲಿವುಡ್ ತಾರೆಯರೂ ಪಾಲ್ಗೊಂಡಿದ್ದರು.
ರಾಜೀನಾಮೆ ಅಂಗೀಕಾರ: ಇದೇ ವೇಳೆ, ಕಥುವಾ ಪ್ರಕರಣದ ಆರೋಪಿಗಳ ಪರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಇಬ್ಬರು ಸಚಿವರ ರಾಜೀನಾಮೆಯನ್ನು ರವಿವಾರ ಸಿಎಂ ಮೆಹಬೂಬಾ ಮುಫ್ತಿ ಅಂಗೀಕರಿಸಿದ್ದಾರೆ. ಇದೇ ವೇಳೆ, ಕಥುವಾ ಪ್ರಕರಣದ ಬಗ್ಗೆ ಪೊಲೀಸರ ತನಿಖೆಯು ಕುಮ್ಮಕ್ಕಿನಿಂದ ಕೂಡಿದ್ದು ಎಂದು ಜಮ್ಮು- ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ಗುಲಾಂ ಅಹ್ಮದ್ ಮಿರ್ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಬಹಿರಂಗಗೊಂಡಿದೆ. ಈ ಬಗ್ಗೆ ಪ್ರಸ್ತಾವಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ‘ನಮ್ಮ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಕ್ಕೆ ನಾನು ಕ್ರಮ ಕೈಗೊಂಡಿದ್ದೇವೆ. ಈಗ ರಾಹುಲ್ ಗಾಂಧಿ ಅವರು ಮಿರ್ ರಾಜೀನಾಮೆ ಪಡೆಯಲಿ’ ಎಂದು ಸವಾಲು ಹಾಕಿದ್ದಾರೆ.
ವರ್ಗಾಯಿಸಲು ಕೋರಿಕೆ: ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಮೃತ ಬಾಲಕಿಯ ಕುಟುಂಬ ಸದಸ್ಯರು ಚಿಂತನೆ ನಡೆಸಿದ್ದಾರೆ. ಇದೇ ವೇಳೆ, ಬಾಲಕಿಯ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ಭೂಮಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, 8 ಕಿ.ಮೀ. ದೂರದಲ್ಲಿ ಆಕೆಯನ್ನು ಮಣ್ಣು ಮಾಡಿದ್ದಾಗಿ ಕುಟುಂಬಿಕರು ಹೇಳಿದ್ದಾರೆ.
ಆನಂದ್ ಮಹೀಂದ್ರಾ ಕಿಡಿ
ಮರಣದಂಡನೆ ವಿಧಿಸುವ ವ್ಯಕ್ತಿ ಆಸ್ಥೆಯಿಂದ ಆ ಕೆಲಸ ವಹಿಸಿಕೊಂಡಿರುವುದಿಲ್ಲ. ಆದರೆ, ಪುಟಾಣಿ ಮಕ್ಕಳನ್ನು ಕೊಲ್ಲುವಂಥ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದರೆ, ನಾನೇ ಸ್ವಇಚ್ಛೆಯಿಂದ ಮುಂದೆಬರಲು ಹಿಂಜರಿಯುವುದಿಲ್ಲ. ಶಾಂತವಾಗಿರಬೇಕೆಂದು ನಾನು ಬಹಳಷ್ಟು ಯತ್ನಿಸುತ್ತೇನೆ. ಆದರೆ, ನಮ್ಮ ದೇಶದಲ್ಲಿ ಹೀಗಾಗುತ್ತಿರುವುದು ನೋಡಿದರೆ ರಕ್ತ ಕುದಿಯುತ್ತದೆ ಎಂದು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.