ಆರೋಗ್ಯ ವೀರರಿಗೆ ಸೇನಾಪಡೆಗಳಿಂದ ಇಂದು ಪುಷ್ಪವೃಷ್ಟಿ ಗೌರವ: ಪ್ರಧಾನಿ ಮೋದಿ ಸ್ವಾಗತ
Team Udayavani, May 3, 2020, 7:57 AM IST
ನವದೆಹಲಿ: ಕೋವಿಡ್-19 ವಿರುದ್ಧ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಆರೋಗ್ಯ ಯೋಧರಿಗೆ ಇಂದು ದೇಶದ ಉದ್ದಗಲಕ್ಕೂ ಭಾರತೀಯ ಮೂರು ಸಶಸ್ತ್ರ ಪಡೆಗಳು ಗೌರಸ ಸಲ್ಲಿಸಲಿದೆ. ವಿಮಾನಗಳಿಂದ ಫ್ಲೈ ಪಾಸ್ಟ್, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ಹಡುಗುಗಳಲ್ಲಿ ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗಿದೆ.
ಕೋವಿಡ್ 19 ವೈರಸ್ ವಿರುದ್ಧ ಹೋರಾಟಡುತ್ತಿರುವ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ನೈರ್ಮಲ್ಯ ಕೆಲಸಗಾರರು ಮುಂತಾಗಿ ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ವೀರರಿಗೆ ಗೌರವ ಸಲ್ಲಿಸಲು ದೇಶದ ಸಶಸ್ತ್ರ ಪಡೆಗಳು ಹಾಕಿಕೊಂಡಿರುವ ಯೋಜನೆ ಇದು.
ಭಾರತೀಯ ಸೇನೆ, ಭಾರತೀಯ ವಾಯುಪಡೆ (ಐಎಎಫ್), ಮತ್ತು ಭಾರತೀಯ ನೌಕಾಪಡೆ ಇಂದು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಶುಕ್ರವಾರ ಸಂಜೆ ನಡೆದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಈ ಕುರಿತು ಮಾಹಿತಿ ನೀಡಿದ್ದರು. .
ಈ ವೇಳೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಈಶಾನ್ಯದ ಅಸ್ಸಾಂನಿಂದ ಗುಜರಾತ್ನ ಕಚ್ವರೆಗೆ ವಾಯು ಪಡೆ ವಿಮಾನಗಳಿಂದ ಗೌರವ ಹಾರಾಟ ನಡೆಯಲಿದೆ. ಜತೆಗೆ ದೇಶದ ಕರಾವಳಿ ತೀರದುದ್ದಕ್ಕೂ ನಿಂತಿರುವ ಹಡಗುಗಳ ದೀಪಗಳನ್ನು ಬೆಳಗಿಸುವ ಮೂಲಕ ನೌಕಾ ಪಡೆ ವಿಶೇಷ ಗೌರವ ಸಲ್ಲಿಸಲಿದೆ.
ಮೂರನೆಯದಾಗಿ ದೇಶದ ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್ಗಳ ಮೂಲಕ ಪುಷ್ಪ ವೃಷ್ಟಿ ಸುರಿಸುವ ಜತೆಗೆ ಬಹುತೇಕ ಜಿಲ್ಲೆಗಳಲ್ಲಿನ ವೈದ್ಯಕೀಯ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್ ನುಡಿಸುವ ಮೂಲಕ ಆರೋಗ್ಯ ವೀರರಿಗೆ ವಿಶೇಷ ಕೃತಜ್ಞತೆಯ ಗೌರವ ಸಲ್ಲಿಸಲಾಗುವುದು ಎಂದು ರಾವತ್ ಅವರು ಮಾಹಿತಿ ನೀಡಿದರು.
ಮೂರು ರಕ್ಷಣಾ ಸೇವೆಗಳ ೀ ಮಹತ್ವದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. “ರಕ್ಷಣಾ ಸಿಬ್ಬಂದಿಯ ಈ ಕಾರ್ಯವನ್ನು ನಾನು ಇಂದು ಸ್ವಾಗತಿಸುತ್ತೇನೆ. ಆರೋಗ್ಯ ಯೋಧರು ಕಾಳಜಿ ವಹಿಸಿದ್ದರಿಂದಲೇ ಭಾರತವು ಕೋವಿಡ್ 19 ವಿರುದ್ಧ ಬಲವಾದ ಹೋರಾಟ ನಡೆಸಿದೆ. ಅವರ ಸೇವೆಯನ್ನು ಎಂದೂ ಮರೆಯಲಾಗದು. ಭಾರತ ಆರೋಗ್ಯ ಯೋಧರನ್ನು ಮತ್ತು ಅವರ ಕುಟುಂಬವನ್ನು ಶ್ಲಾಘಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
I welcome the announcements by the Chief of Defence Staff today. India has waged a strong fight against COVID-19 due to courageous frontline warriors who have cared and cured many. They are spectacular. India applauds them and their families. https://t.co/IeKb7qZYwI
— Narendra Modi (@narendramodi) May 1, 2020