ಗೃಹ ಸಚಿವಾಲಯದಡಿ ಕರಾವಳಿ ರಕ್ಷಣಾ ಪಡೆ: ಕೇಂದ್ರ ಚಿಂತನೆ
Team Udayavani, Apr 1, 2019, 12:20 PM IST
ಹೊಸದಿಲ್ಲಿ : ದೇಶದ ಸಮಗ್ರ ಕರಾವಳಿಯ ಭದ್ರತೆಯನ್ನು ಹೆಚ್ಚಿಸುವ ದಿಶೆಯಲ್ಲಿ ಅದರ ಪೂರ್ಣ ಹೊಣೆಗಾರಿಕೆಯನ್ನು ಕರಾವಳಿ ಕಾವಲು ಪಡೆಗೆ ವಹಿಸಿಕೊಡುವುದನ್ನು ಮತ್ತು ಅದನ್ನು ಗೃಹ ಸಚಿವಾಲಯದಡಿ ತರುವ ಪ್ರಸ್ತಾವವನ್ನು ಕೇಂದ್ರ ಸರಕಾರ ಪರಿಗಣಿಸುತ್ತಿದೆ.
ನೂತನ ಪ್ರಸ್ತಾವಿತ ಬದಲಾವಣೆಯ ಪ್ರಕಾರ ಕೇಂದ್ರ ಸರಕಾರ, ಕರಾವಳಿ ಕಾವಲು ಪಡೆಯನ್ನು ಕೇಂದ್ರ ಗೃಹ ಸಚಿವಾಲಯದ ಅಡಿಗೆ ತರಲು ಉದ್ದೇಶಿಸಿದೆ. ಪ್ರಕೃತ ಕರಾವಳಿ ಕಾವಲು ಪಡೆಯು ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸರಕಾರಿ ಮೂಲಗಳ ಪ್ರಕಾರ ಪ್ರಕೃತ ದೇಶದ ನೌಕಾಪಡೆ, ಕರಾವಳಿ ಕಾವಲ ಪಡೆ ಮತ್ತು ಸ್ಥಳೀಯ ಜನತೆಯ ನಡುವೆ ಯಾವುದೇ ತಾಳಮೇಳ, ಹೊಂದಾಣಿಕೆ ಇಲ್ಲವಾಗಿದೆ.
ಮಾತ್ರವಲ್ಲ ದೇಶದ ಸಮಗ್ರ ಕರಾವಳಿ ತೀರದಲ್ಲಿ ಯಾವುದೇ ಒಂದು ಕೇಂದ್ರೀಯ ಪಡೆ ಕಾರ್ಯಾಚರಿಸುತ್ತಿಲ್ಲ. ಇದುವೇ ಕರಾವಳಿ ಕಾವಲು ಪಡೆಯ ಪ್ರಮುಖ ದೌರ್ಬಲ್ಯವೆಂದು ವಿಶ್ಲೇಷಿಸಲಾಗಿದೆ.
ಹಾಗಿದ್ದರೂ ಕರಾವಳಿ ಕಾವಲು ಪಡೆಗೆ ತಟ ರಕ್ಷಣೆಯಲ್ಲಿ ಕಾರ್ಯಾಚರಣೆಯ ಸವಾಲುಗಳು ಮತ್ತು ಬೆದರಿಕೆಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ, ಅರಿವು ಇದೆ. ಮೇಲಾಗಿ ಕರಾವಳಿ ಕಾವಲು ಪಡೆಯ ಸಿಬಂದಿಗಳು ಸಮುದ್ರ ಕಾರ್ಯಾಚರಣೆಯಲ್ಲಿ ಉತ್ತಮ ತರಬೇತಿ ಪಡೆಯದವರಾಗಿದ್ದಾರೆ.
ಈ ಎಲ್ಲ ಕಾರಣಗಳನ್ನು ದೃಷ್ಟಿಯಲ್ಲಿರಿಸಿಕೊಂಡು ದೇಶದ ಸಮಗ್ರ ಕರಾವಳಿಯ ರಕ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆಯನ್ನು ಕೇಂದ್ರ ರಕ್ಷಣಾ ಸಚಿವಾಲಯದ ಅಡಿಗೆ ತರುವುದರಿಂದ ಉತ್ತಮ ಹೊಂದಾಣಿಕೆ, ಕಾರ್ಯ ತತ್ಪರಣೆ, ಪರಿಣಾಮಕಾರಿತ್ವವನ್ನು ಸಾಧಿಸಬಹುದಾಗಿದೆ ಎಂದು ತಿಳಿಯಲಾಗಿದೆ.
ಯುದ್ಧ ಸ್ಫೋಟಗೊಂಡಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯದ ನಡುವೆ ಉತ್ತಮ ಹೊಂದಾಣಿಕೆಯನ್ನು ಕಲ್ಪಿಸುವಲ್ಲಿ ಈ ಉಪಾಯ ಪರಿಣಾಮಕರಿಯಾಗಲಿದೆ ಎಂದು ತಿಳಿಯಲಾಗಿದೆ.