ಚಳಿಗಾಲಕ್ಕೆ ಖೋ ಕೊಟ್ಟ ಭಾರತ-ಚೀನ ಗಡಿ ಬಿಕ್ಕಟ್ಟು
ವಿಶ್ವದ ಅತ್ಯುನ್ನತ ಯುದ್ಧಭೂಮಿಯಲ್ಲಿ ಈಗ ಟ್ಯಾಂಕ್ಗಳ ಗರ್ಜನೆ
Team Udayavani, Sep 28, 2020, 6:26 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಡಾಖ್: ಭಾರತ- ಚೀನ ನಡುವಣ ಗಡಿಬಿಕ್ಕಟ್ಟು ಈಗ ಚಳಿಗಾಲಕ್ಕೂ ಖೋ ಕೊಟ್ಟಿದೆ.
ಪೂರ್ವ ಲಡಾಖ್ನ ಎಲ್ಎಸಿ (ವಾಸ್ತವ ಗಡಿ ನಿಯಂತ್ರಣ ರೇಖೆ)ಯ 14,500 ಅಡಿ ಎತ್ತರದ ವಿಶ್ವದ ಅತ್ಯುನ್ನತ ಯುದ್ಧಭೂಮಿಯಲ್ಲಿ ಈಗ ಯುದ್ಧ ಟ್ಯಾಂಕ್ಗಳ ಸದ್ದು ಕೇಳಿಬರುತ್ತಿದೆ.
ಲಡಾಖ್ನ ಚುಮಾರ್ ಮತ್ತು ದೆಮಾcಕ್ ಪ್ರದೇಶ ಗಳಲ್ಲಿ ಭಾರತೀಯ ಸೇನೆಯ ಟಿ-72, ಟಿ-90 ಭೀಷ್ಮ ಟ್ಯಾಂಕ್ಗಳು ಗರ್ಜಿಸುತ್ತಿರುವ ವೀಡಿಯೋ ವೈರಲ್ ಆಗಿದೆ.
ಇವುಗಳೊಂದಿಗೆ ಬಿಎಂಪಿ-2 ಕಾಲಾಳು ಪಡೆ ಯುದ್ಧವಾಹನಗಳನ್ನೂ ಸೇನೆ ನಿಲ್ಲಿಸಿದೆ. ಬಿಎಂಪಿ ಯುದ್ಧ ವಾಹನಗಳು – 40 ಡಿಗ್ರಿ ಸೆ. ತಾಪಮಾನದಲ್ಲೂ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿವೆ.
ಚಳಿಗಾಲದ ಸವಾಲಿಗೆ ಸಿದ್ಧ
ಲಡಾಖ್ನ ಚಳಿಗಾಲ ಅತ್ಯಂತ ಕಠಿನ. ತಾಪಮಾನ -35 ಡಿಗ್ರಿ ಸೆ.ಗೆ ಇಳಿಕೆ ಆಗುವುದಷ್ಟೇ ಅಲ್ಲ, ಅತೀ ವೇಗದ ಹಿಮಗಾಳಿಯೂ ಇಲ್ಲಿ ಸೈನಿಕರ ಜೀವ ಅಲ್ಲಾಡಿಸುವಂಥದ್ದು. ಈ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಚೀನದ ಯಾವುದೇ ದುಸ್ಸಾಹಸವನ್ನು ಹಿಮ್ಮೆಟ್ಟಿಸಲು “ದಿ ಫೈರ್ ಆ್ಯಂಡ್ ಫ್ಯೂರಿ ಕಾಪ್ಸ್ì’ (ಎಫ್ಎಎಫ್ಸಿ) ಭರ್ಜರಿ ತಾಲೀಮು ಆರಂಭಿಸಿದೆ.
ಏನಿದು ಎಫ್ಎಎಫ್ಸಿ?
ಲೇಹ್ ಮೂಲದ 14ನೇ ಕಾರ್ಪ್ಸ್ ಅನ್ನು “ದಿ ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್ ಎಂದೇ ಕರೆಯುತ್ತಾರೆ. ಲಡಾಖ್ನ ದುರ್ಗಮ ಪ್ರದೇಶದ ಭದ್ರತೆಗಾಗಿ ರಚಿಸಲಾದ ತುಕಡಿ ಇದು. ಯಾಂತ್ರೀಕೃತ ಕಾಲಾಳುಪಡೆ ಇದಾಗಿದ್ದು, ಹಿಮಗಾಳಿಯ ಸವಾಲನ್ನು ಯಶಸ್ವಿಯಾಗಿ ಎದುರಿಸಬಲ್ಲದು. ಎಫ್ಎಎಫ್ಸಿ ಸಿಬಂದಿ ಯುದ್ಧ ಸಾಮಗ್ರಿ, ಆಹಾರ, ರಕ್ಷಾ ಉಡುಪು ಸಹಿತ ಚಳಿಗಾಲಕ್ಕೆ ಅಗತ್ಯವಾದ ಸಕಲ ಸಿದ್ಧತೆ ಮಾಡಿಕೊಂಡಿದೆ. “ಚಳಿಗಾಲದಲ್ಲಿ ದೀರ್ಘಾವಧಿಯವರೆಗೆ ಸವಾಲುಗಳನ್ನು ಎದುರಿಸಲು ತುಕಡಿ ಸಮರ್ಥವಾಗಿದೆ’ ಎಂದು ಮೇ|ಜ| ಅರವಿಂದ್ ಕಪೂರ್ “ಎಎನ್ಐ’ಗೆ ತಿಳಿಸಿದ್ದಾರೆ.
ಲಕ್ಷ ಸೈನಿಕರು!
ಲಡಾಖ್ನ ಎಲ್ಎಸಿ ಸಮೀಪ ಉಭಯ ರಾಷ್ಟ್ರಗಳು ತಲಾ 50 ಸಾವಿರ ಸೈನಿಕರನ್ನು ನಿಯೋಜಿಸಿವೆ. ಯುದ್ಧ ಟ್ಯಾಂಕ್ಗಳಲ್ಲದೆ ಸಮೀಪದ ವಾಯು ನೆಲೆಗಳಲ್ಲಿ ಸಮರ ವಿಮಾನಗಳೂ ಗಸ್ತು ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲೂ ಗಡಿ ಮತ್ತೆ ಉದ್ವಿಗ್ನತೆಯ ದವಡೆಗೆ ಸಿಲುಕಬಹುದು ಎಂದು ರಕ್ಷಣ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಚೀನದ ಸೇನೆ ಕೂಡ ಲಘು ಟಿ-15 ಟ್ಯಾಂಕ್ಗಳನ್ನು ಎಲ್ಎಸಿ ಸಮೀಪ ನಿಯೋಜಿಸಿ ಪ್ರಚೋದನೆ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲಡಾಖ್ ಸ್ಕೌಟ್ಸ್ ಬಳಗಕ್ಕೆ 131 ಹೊಸ ಯೋಧರು
ಇತ್ತೀಚೆಗಷ್ಟೇ ತರಬೇತಿ ಮುಗಿಸಿದ 131 ಹೊಸ ಯುವ ಯೋಧರು ಲಡಾಖ್ ಸ್ಕೌಟ್ಸ್ ರೆಜಿಮೆಂಟ್ ಬಳಗಕ್ಕೆ ಶನಿವಾರ ಪದಾರ್ಪಣೆ ಮಾಡಿದ್ದಾರೆ. ಇವರೆಲ್ಲರೂ ಸ್ಥಳೀಯ ಯುವಕರಾಗಿದ್ದು, ಲಡಾಖ್ನ ದುರ್ಗಮ ಪರ್ವತ, ಕಣಿವೆಗಳ ಇಂಚಿಂಚೂ ಸೂಕ್ಷ್ಮ ಮಾಹಿತಿಗಳನ್ನು ಬಲ್ಲವರು. ಅಷ್ಟೇ ಅಲ್ಲ, ಚಳಿಗಾಲದಲ್ಲಿ ಗಸ್ತು ಹೊಣೆ ಹೊತ್ತು ವಾತಾವರಣದ ಸವಾಲುಗಳನ್ನು ಸರಾಗವಾಗಿ ನಿಭಾಯಿಸಬಲ್ಲರು.