ಜಿಡಿಪಿ ಪ್ರಗತಿ: ದೂರವಾದ ಆತಂಕ
Team Udayavani, Jun 2, 2018, 6:00 AM IST
ಕೇಂದ್ರೀಯ ಸಾಂಖಿಕ ಕಚೇರಿ ಬಿಡುಗಡೆಗೊಳಿಸಿರುವ ಆರ್ಥಿಕ ಅಭಿವೃದ್ಧಿಯ ಅಂಕಿಅಂಶ ಆಶಾದಾಯಕವಾಗಿದೆ. 2017-18ನೇ ಸಾಲಿನ ವಿತ್ತ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 7.7 ಪ್ರಗತಿ ಕಂಡಿದೆ ಎಂದು ಅಂಕಿಅಂಶದಿಂದ ತಿಳಿದು ಬಂದಿದೆ. ಇದು ಕಳೆದ ಏಳು ತ್ತೈಮಾಸಿಕಗಳಲ್ಲಿ ಅತಿ ಹೆಚ್ಚಿನ ಪ್ರಗತಿಯಾಗಿದೆ. ದೇಶದ ಆರ್ಥಿಕತೆಯ ಆರೋಗ್ಯವನ್ನು ಅಂದಾಜಿಸುವ ಒಂದು ಮಾಪಕ ಒಟ್ಟು ಆಂತರಿಕ ಉತ್ಪನ್ನ ಅಥವಾ ಜಿಡಿಪಿ. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾಗಿರುವ ಸರಕು ಮತ್ತು ಸೇವೆಗಳ ಮೌಲ್ಯವನ್ನು ಇದು ಪ್ರತಿನಿಧಿಸುತ್ತದೆ. ಹಿಂದಿನ ತ್ತೈಮಾಸಿಕ ದರದೊಂದಿಗೆ ಹೋಲಿಸಿ ಜಿಡಿಪಿ ದರವನ್ನು ಹೇಳು ವುದು ವಾಡಿಕೆ.ದೇಶದ ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ದರ ಸೂಚಿಸು ವುದರಿಂದ ಹೂಡಿಕೆದಾರರಿಗೆ ಮತ್ತು ವ್ಯಾಪಾರೋದ್ಯಮಿಗಳಿಗೆ ಜಿಡಿಪಿ ದರ ಮಹತ್ವದ್ದಾಗಿದೆ. ಜಿಡಿಪಿ ದರ ಕ್ಷಿಪ್ರವಾಗಿ ವೃದ್ಧಿಯಾಗುತ್ತಿರುವುದು ದೇಶದ ಆರ್ಥಿಕ ವ್ಯವಸ್ಥೆ ಉತ್ತೇಜನಕಾರಿಯಾಗಿರುವುದನ್ನು ಸೂಚಿಸುತ್ತದೆ.
ಶೇ. 7.7 ಜಿಡಿಪಿ ಅಭಿವೃದ್ಧಿ ದರ ದೇಶದ ಆರ್ಥಿಕತೆಯ ಕುರಿತಾಗಿದ್ದ ಆತಂಕಗಳನ್ನು ದೂರ ಮಾಡಿದೆ. ನೋಟು ಅಮಾನ್ಯಿàಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಬಳಿಕ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ನಕರಾತ್ಮಕ ವಿಚಾರಗಳು ಹರಡಿದ್ದವು.ಕೇಂದ್ರ ಸರಕಾರ ಈ ಎರಡು ದಿಟ್ಟ ನಿರ್ಧಾರಗಳನ್ನು ಕೈಗೊಂಡ ಪರಿಣಾಮವಾಗಿ ದೇಶದ ಆರ್ಥಿಕತೆ ತಳ ಸೇರಲಿದೆ ಎಂಬ ಭಾವನೆಯಿತ್ತು.ಅದಕ್ಕೆ ತಕ್ಕಂತೆ ಜಿಎಸ್ಟಿಯ ಆರಂಭದ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ವಿಪಕ್ಷಗಳು ರಾಜಕೀಯ ಕಾರಣಕ್ಕಾಗಿ ಈ ನಿರ್ಧಾರಗಳನ್ನು ವಿರೋಧಿಸಿ ರಬಹುದು. ಆದರೆ ಕೆಲವು ಆರ್ಥಿಕ ತಜ್ಞರು ಕೂಡಾ ನೋಟು ಅಮಾ ನ್ಯಿàಕರಣ ಮತ್ತು ಜಿಎಸ್ಟಿಯಿಂದಾಗಿ ಭಾರತದ ಆರ್ಥಿಕತೆ ಸರ್ವನಾಶ ವಾಗಲಿದೆ ಎಂದು ಷರಾ ಬರೆದಿದ್ದರು. ಅವರು ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಆರ್ಥಿಕತೆ ಮತ್ತೆ ಗರಿಗೆದರಿರುವುದು ರಾಜಕೀಯವಾಗಿಯೂ ಮುಖ್ಯವಾಗುತ್ತದೆ.
ಹೂಡಿಕೆಯಲ್ಲಿ ಗಣನೀಯವಾದ ಅಭಿವೃದ್ಧಿಯಾಗಿರುವುದು ಇನ್ನೊಂದು ಪ್ರಮುಖ ಅಂಶ. ಕೊನೆಯ ತ್ತೈಮಾಸಿಕದಲ್ಲಿ ಹೂಡಿಕೆ ಶೇ. 14.42 ಪ್ರಗತಿಯಾಗಿದ್ದು, ಇದು ಕಳೆದ ವಿತ್ತ ವರ್ಷದಲ್ಲೆ ಈ ಅತ್ಯಧಿಕ. ಅಂತೆಯೇ ನಿರ್ಮಾಣ ಮತ್ತು ಉತ್ಪಾದನಾ ಕ್ಷೇತ್ರವೂ ಅಭಿವೃದ್ಧಿ ಹೊಂದಿರುವುದನ್ನು ಅಂಕಿಅಂಶ ತಿಳಿಸಿದೆ. ಅಭಿವೃದ್ಧಿಶೀಲ ಆರ್ಥಿಕತೆಗೆ ನಿರ್ಮಾಣ ಮತ್ತು ಉತ್ಪಾದನಾ ಕ್ಷೇತ್ರ ಎರಡು ಚಕ್ರಗಳಿದ್ದಂತೆ. ಅಸಂಘಟಿತ ವಲಯದ ಅತ್ಯಧಿಕ ಮಂದಿ ತೊಡಗಿಸಿಕೊಂಡಿರುವ ಈ ಕ್ಷೇತ್ರಗಳು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದಿದರೆ ಜನಸಾಮಾನ್ಯರ ಬದುಕಿನಲ್ಲಿ ಗುಣಾತ್ಮಕವಾದ ಬದಲಾವಣೆಗಳು ಕಾಣಿಸುತ್ತವೆ.
ಇದೇ ವೇಳೆ ಅಂಕಿಅಂಶ ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಕೆಲವು ಕ್ಷೇತ್ರಗಳನ್ನು ಗುರುತಿಸಿದೆ. ಇದರಲ್ಲಿ ಕೃಷಿಯೂ ಒಂದು. ದೇಶದ ಸುಮಾರು ಶೇ. 60ರಷ್ಟು ಮಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೌಕರಿ ಒದಗಿಸುತ್ತಿರುವ ಈ ಕ್ಷೇತ್ರದ ಹಿನ್ನಡೆ ಒಟ್ಟಾರೆ ಆರ್ಥಿಕತೆಯ ಮೇಲೆ ನಕರಾತ್ಮಕವಾದ ಪರಿಣಾಮವನ್ನು ಬೀರುತ್ತದೆ. ಕೃಷಿ ಕ್ಷೇತ್ರದ ಬಿಕ್ಕಟ್ಟು ಒಂದು ಗಂಭೀರವಾದ ಸಮಸ್ಯೆ. ಕೃಷಿ ಕ್ಷೇತ್ರವನ್ನು ಸುಧಾರಿಸಲು ಮತ್ತು ಕೃಷಿಕರ ಆದಾಯವನ್ನು ಹೆಚ್ಚಿಸಲು ಕೈಗೊಂಡಿರಸುವ ಕ್ರಮಗಳು ನಿರೀಕ್ಷಿತ ಫಲಿತಾಂಶ ನೀಡಲು ವಿಫಲಗೊಂಡಿವೆ. ಹೀಗಾಗಿ ರೈತರೀಗ ದಂಗೆಯೇಳುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಉತ್ತರದ ಕೆಲವು ರಾಜ್ಯಗಳ ರೈತರು ಶುಕ್ರವಾರದಿಂದೀಚೆಗೆ 10 ದಿನಗಳ ಮುಷ್ಕರ ಘೋಷಿ ಸಿದ್ದು ಪರಿಸ್ಥಿತಿಯ ಗಾಂಭೀರ್ಯವನ್ನು ಅರಿಯಲು ನೆರವಾಗಬಹುದು. 2022ಕ್ಕಾಗುವಾಗ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿ ಯಿರಿಸಿಕೊಂಡಿರುವ ಸರಕಾರ ಈ ನಿಟ್ಟಿನಲ್ಲಿ ಈಗಿನಿಂದಲೇ ದೃಢ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ನೋಟು ಅಮಾನ್ಯಿಕರಣ ದಿಂದ ದೊಡ್ಡ ಹೊಡೆತ ಬಿದ್ದಿರುವುದೂ ಕೃಷಿ ಕ್ಷೇತ್ರಕ್ಕೆ. ಅಮಾನ್ಯಿಕರಣ ಮತ್ತು ಜಿಎಸ್ಟಿಯಿಂದಾಗಿರುವ ಹಿನ್ನಡೆಯಿಂದ ಚೇತರಿಸಲು ಕೃಷಿ ಕ್ಷೇತ್ರಕ್ಕೆ ಇನ್ನೂ ಸಾಧ್ಯವಾಗಿಲ್ಲ ಎನ್ನುವ ವಾಸ್ತವವನ್ನು ಅರಿತುಕೊಂಡು ಸರಕಾರ ಸೂಕ್ತ ನೀತಿಯನ್ನು ರೂಪಿಸಬೇಕು.
ರಫ್ತು ಕ್ಷೇತ್ರ ಸರಕಾರ ಆದ್ಯತೆಯಲ್ಲಿ ಗಮನ ಹರಿಸಬೇಕಾದ ಇನ್ನೊಂದು ಕ್ಷೇತ್ರ. ರಫ್ತು ಕ್ಷೇತ್ರದಲ್ಲಿ ತುಸು ಹಿನ್ನಡೆಯಾಗಿರುವುದು ಅಂಕಿ -ಅಂಶದಿಂದ ತಿಳಿದು ಬರುತ್ತಿದೆ. ಇದರ ಜತೆಗೆ ಚಾಲ್ತಿ ಖಾತೆ ಕೊರತೆ ಹಿಗ್ಗುತ್ತಿದೆ. ಇವೆರಡೂ ಪರಸ್ಪರ ಪೂರಕವಾಗಿರುವುದರಿಂದ ರಫ್ತು ಚೇತರಿಕೆಗೆ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ