ಭಾರತದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ
ಬಜೆಟ್ ವಿಶ್ಲೇಷಣೆ
Team Udayavani, Jul 6, 2019, 3:03 AM IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿರುವ ಚೊಚ್ಚಲ ಬಜೆಟ್ನಲ್ಲಿ ಇಂದು ಭಾರತ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಉತ್ತರ ಮತ್ತು ಪರಿಹಾರ ಸಿಕ್ಕಿಲ್ಲ. ಜೊತೆಗೆ ದೇಶದ ಆರ್ಥಿಕ ಪ್ರಗತಿ ಬಗ್ಗೆ ಸರಿಯಾದ ರೀತಿಯ ಚಿತ್ರಣವಿಲ್ಲ.
ಕಾರ್ಮಿಕ ವಲಯದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸಾಮಾಜಿಕ ಕ್ಷೇತ್ರಕ್ಕೆ ಹಲವು ರೀತಿಯ ಕೊಡುಗೆಗಳು ನೀಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟತೆಯಿಲ್ಲ. ಕನಿಷ್ಠ ಕೂಲಿ ಬಗ್ಗೆ ಹೇಳಲಾಗಿದೆ. ಆದರೆ ಸರಿಯಾದ ಮಾಹಿತಿ ನೀಡಿಲ್ಲ.
“ಜನ್ಧನ್’ ಯೋಜನೆ ಮೂಲಕ ಮಹಿಳೆಯರ ಸಬಲೀಕರಣದ ಮಾತನಾಡಲಾಗಿದೆ. ಆದರೆ ಈ ಯೋಜನೆಯನ್ನು ಈ ಹಿಂದೆಯೇ ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು ಎಂಬುವುದನ್ನು ನಾವು ಮರೆಯುವಂತಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದ ಹಲವು ಬಡ ಮಹಿಳೆಯರು “ಶೂನ್ಯ ಬ್ಯಾಂಕ್ ಬ್ಯಾಲೆನ್ಸ್’ ಹೊಂದಿದವರಿದ್ದಾರೆ.
ಅಂತಹವರಿಗೆ ಈ ಯೋಜನೆಯಿಂದ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ಮಹಿಳೆಯರಿಗೆ 1ಲಕ್ಷ ರೂ.ವರೆಗೂ ಸಾಲ ನೀಡುವುದಾಗಿ ಘೋಷಿಸಲಾಗಿದೆ. ಇದು ಸ್ವಲ್ಪ ಪ್ರಮಾಣದಲ್ಲಿ ಮಹಿಳಾ ವಲಯಕ್ಕೆ ಅನುಕೂಲವಾಗಬಹುದು.
ಆದರೆ ಗಾರ್ಮೆಂಟ್ ವಲಯಕ್ಕೆ ಇಂತಹದ್ದೇ ಕೊಡುಗೆ ನೀಡಿದ್ದಾರೆ ಎಂಬುವುದು ಸ್ವಷ್ಟತೆ ಇಲ್ಲ. ಆರೋಗ್ಯದ ಕ್ಷೇತ್ರದ ಮೇಲೆ ಬಂಡವಾಳ ಹೂಡ ಬೇಕಾಗಿತ್ತು. ಆದರೆ ಅದು ಕೂಡ ಆಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹತ್ತಾರು ಸಮಸ್ಯೆಗಳಿದ್ದರೂ, ಈ ಬಗ್ಗೆ ಗಮನ ನೀಡಲಾಗಿಲ್ಲ.
ಕೃಷಿ ವಲಯ ಕೂಡ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಈ ವಲಯವನ್ನು ಮರೆಯಲಾಗಿದೆ. ಇದರ ಜೊತೆಗೆ ಯುವ ಜನರು ಉದ್ಯೋಗವಿಲ್ಲದೆ, ಉದ್ಯೋಗಕ್ಕಾಗಿ ಹುಡುಕಾಟ ದಲ್ಲಿದ್ದಾರೆ. ಆದರೆ ಉದ್ಯೋಗ ಸೃಷ್ಟಿ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿಲ್ಲ.
ಈ ಹಿಂದೆ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವ ರಾಗಿದ್ದಾಗ ಮಂಡನೆ ಮಾಡಿರುವ ಹಲವು ಯೋಜನೆಗಳೇ ಮತ್ತೆ ಮರುಕಳಿಸಿವೆ. ಜಗತ್ತು ಪರಿಸರ ಮಾಲಿನ್ಯದಿಂದ ಬಳಲುತ್ತಿದೆ. ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಬಜೆಟ್ನಲ್ಲಿ ಯಾವುದೇ ರೀತಿಯ ಉತ್ತರವಿಲ್ಲ. ಪರಿಸರ ಮಾಲಿನ್ಯ ದೊಡ್ಡ ತೊಂದರೆಯಾಗಿ ಪರಿಣಮಿಸಿರುವುದರ ಜೊತೆಗೆ ನೀರಿನ ಸಮಸ್ಯೆ ಕೂಡ ಇನ್ನಿಲ್ಲದಂತೆ ಕಾಡುತ್ತಿದ್ದು, ಇದಕ್ಕೆ ಪರಿಹಾರ ಬಜೆಟ್ನಲ್ಲಿ ಇಲ್ಲ. ಒಟ್ಟಾರೆ ಈ ಬಜೆಟ್ ಜನರ ನಿರೀಕ್ಷೆಯಂತೆ ಇಲ್ಲ.
* ಡಾ.ಎಂ.ಚಂದ್ರಪೂಜಾರಿ, ಸಾಮಾಜಿಕ ಸಂಶೋಧಕರು