ಭಾರತದ ಬೆಂಬಲ ನನ್ನ ಹೃದಯ ಮುಟ್ಟಿದೆ: ಇಸ್ರೇಲ್ ರಾಯಭಾರಿ
Team Udayavani, Dec 3, 2022, 6:30 AM IST
ನವದೆಹಲಿ: ಟ್ವಿಟರ್ನಲ್ಲಿ ಯಹೂದಿ ವಿರೋಧಿ ದ್ವೇಷಪೂರಿತ ಪೋಸ್ಟ್ ಸ್ವೀಕರಿಸಿದ ನಂತರ ಭಾರತದಿಂದ ವ್ಯಕ್ತವಾದ ಹೃದಯಸ್ಪರ್ಶಿ ಬೆಂಬಲಕ್ಕೆ ಮೂಕವಿಸ್ಮಿತನಾಗಿದ್ದೇನೆ ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಹೇಳಿದ್ದಾರೆ.
“ನಿಮ್ಮ ಬೆಂಬಲವು ನನ್ನ ಹೃದಯವನ್ನು ಮುಟ್ಟಿದೆ. ದ್ವೇಷಪೂರಿತ ಪೋಸ್ಟ್ ಯಾವುದೇ ರೀತಿಯಲ್ಲೂ ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹ ಸಂಬಂಧವನ್ನು ಪ್ರತಿಬಿಂಬಿಸುವುದಿಲ್ಲ. ಯಹೂದಿ ವಿರೋಧಿ ಭಾವನೆಗಳು ಈಗಲೂ ಅಸ್ತಿತ್ವದಲ್ಲಿದೆ ಎಂಬುದನ್ನು ಇದು ನೆನಪಿಸಿದೆ. ನಾವು ಇದನ್ನು ಜಂಟಿಯಾಗಿ ವಿರೋಧಿಸಬೇಕು ಹಾಗೂ ನಾಗರಿಕ ಮಟ್ಟದ ಚರ್ಚೆಯನ್ನು ಕಾಪಾಡಿಕೊಳ್ಳಬೇಕು,’ ಎಂದು ನಾರ್ ಗಿಲೋನ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, “ನಿಮ್ಮಂತಹ ಕಲ್ಮಶಗಳನ್ನು ಸುಟ್ಟುಹಾಕಿದ ಹಿಟ್ಲರ್ ಗ್ರೇಟ್. ಕೂಡಲೇ ಭಾರತ ಬಿಟ್ಟು ಇಲ್ಲಿಂದ ತೊಲಗು. ಹಿಟ್ಲರ್ ಒಬ್ಬ ಶ್ರೇಷ್ಠ ವ್ಯಕ್ತಿ’ ಎಂದು ಅವರಿಗೆ ಬಂದ ಪೋಸ್ಟ್ನ ಸ್ಕ್ರೀನ್ಶಾಟ್ ಕೂಡ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವೇಳೆ “ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಇಸ್ರೇಲಿ ನಿರ್ದೇಶಕ ಲ್ಯಾಪಿಡ್ ಅವರು “ಅಸಹ್ಯ’ ಎಂದು ಜರಿದಿದ್ದರು. ಲ್ಯಾಪಿಡ್ ಹೇಳಿಕೆಯನ್ನು ಖಂಡಿಸಿದ್ದ ರಾಯಭಾರಿ ಗಿಲೋನ್, ಇದಕ್ಕಾಗಿ ಭಾರತದ ಕ್ಷಮೆಯಾಚಿಸಿದ್ದರು.