ಇನ್ಫಿ ಷೇರುಗಳ ಮರುಖರೀದಿ ಘೋಷಣೆ
Team Udayavani, Aug 20, 2017, 8:10 AM IST
ಹೊಸದಿಲ್ಲಿ: ಐಟಿ ದಿಗ್ಗಜ ಇನ್ಫೋಸಿಸ್ಗೆ ಸಿಇಒ ವಿಶಾಲ್ ಸಿಕ್ಕಾ ಅವರು ದಿಢೀರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕಂಪೆನಿಯು 13 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳ ಮರುಖರೀದಿಯ ಘೋಷಣೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಲು ಕಂಪೆನಿ ಈ ನಿರ್ಧಾರ ಕೈಗೊಂಡಿದೆ.
ಅದರಂತೆ, ಇನ್ಫೋಸಿಸ್ ಕಂಪೆನಿಯು ತನ್ನದೇ ಆದ 11.3 ಕೋಟಿ ಷೇರುಗಳನ್ನು ಹೂಡಿಕೆದಾರರಿಂದ ಖರೀದಿಸಲಿದೆ. ಇದಕ್ಕಾಗಿ ಕಂಪೆನಿ 13 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಒಂದು ಷೇರಿಗೆ 1,150 ರೂ.ಗಳ ಲೆಕ್ಕದಲ್ಲಿ ಖರೀದಿ ನಡೆಯಲಿದೆ. ಅಂದರೆ, ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಷೇರು ದರ ಏನಿತ್ತೋ ಅದರ ಶೇ.25ರಷ್ಟು ಹೆಚ್ಚು ಮೊತ್ತಕ್ಕೆ ಖರೀದಿಸುವ ಮೂಲಕ ಮಾರುಕಟ್ಟೆಯಲ್ಲಿ ಕಂಪೆನಿಯ ಷೇರು ದರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಡೆಯಲಾಗುತ್ತದೆ.
ನೇಮಕವೇ ತಲೆನೋವು
ಏತನ್ಮಧ್ಯೆ, ಸಿಕ್ಕಾ ರಾಜೀನಾಮೆಯಿಂದ ತೆರವಾದ ಸಿಇಒ ಸ್ಥಾನವನ್ನು ಭರ್ತಿ ಮಾಡುವುದೇ ಇದೀಗ ಇನ್ಫೋಸಿಸ್ಗೆ
ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕಂಪೆನಿಯ ಆಡಳಿತ ಮಂಡಳಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದೆ. ಹೀಗಿರುವಾಗ, ಸಿಇಒ ಸ್ಥಾನಕ್ಕೆ ಯಾರನ್ನು ನೇಮಕ ಮಾಡುವುದು, ಅದಕ್ಕೆ ಮಂಡಳಿಯ ಎಲ್ಲ ಸದಸ್ಯರು ಒಪ್ಪುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಅಂದು ಬಾಹ್ಯ ಅಭ್ಯರ್ಥಿಯಾದ ವಿಶಾಲ್ ಸಿಕ್ಕಾ ಅವರನ್ನು ನೇಮಕ ಮಾಡುವಾಗಲೇ ಹಲವು ಸವಾಲುಗಳು ಎದುರಾಗಿದ್ದವು. ಈಗ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟಕರವಾಗಿದೆ ಎಂದು ಕಂಪೆನಿ ಮೂಲಗಳು ಹೇಳಿವೆ.
ಕಂಪೆನಿಯು ಇನ್ನೂ ಯಾವುದೇ ಬಾಹ್ಯ ಅಭ್ಯರ್ಥಿಯ ನೇಮಕದ ಕುರಿತು ಚಿಂತನೆ ನಡೆಸಿಲ್ಲ. ಇನ್ನು ಕಂಪೆನಿಯೊಳಗೇ ಇರುವವರ ಬಗ್ಗೆ ಹೇಳುವುದಾದರೆ ಮಧ್ಯಂತರ ಸಿಇಒ ಪ್ರವೀಣ್ ರಾವ್, ಸಿಎಫ್ಒ ರಂಗನಾಥ್ ಡಿ. ಮಾವಿನಕೆರೆ, ಉಪ ಸಿಒಒ ರವಿಕುಮಾರ್ ಎಸ್., ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಸೇವೆಗಳ ಮುಖ್ಯಸ್ಥ ಮೋಹಿತ್ ಜೋಷಿ ಮತ್ತಿತರರ ಹೆಸರುಗಳು ಸಿಇಒ ಹುದ್ದೆಗೆ ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು