ಟೈರ್ಗೆ ನೈಟ್ರೋಜನ್ ಕಡ್ಡಾಯ?
Is nitrogen compulsory for tires?
Team Udayavani, Jul 9, 2019, 5:57 AM IST
ಅಪಘಾತ ತಪ್ಪಿಸಲು ಚಿಂತನೆ ;ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವ ನಿತಿನ್ ಗಡ್ಕರಿ
ಹೊಸದಿಲ್ಲಿ:ಟೈರ್ ಸ್ಫೋಟದಿಂದ ಆಗುವ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ಚಿಂತನೆ ನಡೆಸಿದೆ.
ಟೈರುಗಳ ಬಾಳಿಕೆ ಹೆಚ್ಚಿಸುವ ಉದ್ದೇಶದಿಂದ, ಟೈರ್ಗಳ ತಯಾರಿಕೆಗೆ ಬಳಸಲಾಗುವ ರಬ್ಬರ್ನ ಜತೆಗೆ ಸಿಲಿಕಾನ್ ಮಿಶ್ರಣ ಮಾಡುವಂತೆ ಸೂಚಿಸಲು ಹಾಗೂ ಟೈರುಗಳಿಗೆ ಸಾಮಾನ್ಯ ಗಾಳಿ ತುಂಬಿಸುವ ಬದಲು ಶುದ್ಧ ನೈಟ್ರೋಜನ್ (ಸಾರಜನಕ) ಅನಿಲ ತುಂಬಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ನಿಯಮಗಳಂತೆ, ಟೈರ್ಗಳಲ್ಲಿ ಸಿಲಿಕಾನ್ ಸೇರಿಸುವಿಕೆ ಹಾಗೂ ನೈಟ್ರೋಜನ್ ಅನಿಲ ತುಂಬುವಿಕೆಯಿಂದಾಗಿ, ಉಷ್ಣಾಂಶ ಹೆಚ್ಚಳದಿಂದ ಟೈರುಗಳು ಒಡೆಯುವಂಥ ಘಟನೆಗಳನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ನೋಯ್ಡಾ-ಆಗ್ರಾ ಯಮುನಾ ಎಕ್ಸ್ಪ್ರಸ್ ಹೈವೇಯಲ್ಲಿ ಸೋಮವಾರ ಬೆಳಗ್ಗೆ ಬಸ್ಸೊಂದು ಅಪಘಾತಕ್ಕೀಡಾಗಿ 29 ಜನರು ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಗಡ್ಕರಿ ಉತ್ತರಿಸುವಾಗ, ಸಿಲಿಕಾನ್, ನೈಟ್ರೋಜನ್ ಅನಿಲ ವಿಚಾರಗಳನ್ನು ಉಲ್ಲೇಖೀಸಿದರು.
ದರ ಎಷ್ಟು?: ಒಂದು ಟೈರಿಗೆ ನೈಟ್ರೋಜನ್ ಅನಿಲ ತುಂಬಿಸಲು ಭಾರತದಲ್ಲಿ ಸದ್ಯಕ್ಕೆ 200ರಿಂದ 400 ರೂ. ಶುಲ್ಕ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ. ಟೈರಿನ ನೈಟ್ರೋಜನ್ ಪ್ರಮಾಣ ಅಳೆಯಲೂ ಒಂದು ಟೈರಿಗೆ 10 ರೂ. ದರವಿದೆ. ನಗರಗಳಲ್ಲಿ ಇದು ವ್ಯತ್ಯಾಸವಾದರೂ ಆಗಬಹುದು.
ಬುಲೆಟ್ಪ್ರೂಫ್ ಜಾಕೆಟ್:ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಬುಲೆಟ್ ಪ್ರೂಫ್ ಜಾಕೆಟ್ಗಳಿಗೆ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ 2020ರ ಎಪ್ರಿಲ್ನೊಳಗೆ 639 ಕೋಟಿ ರೂ. ವೆಚ್ಚದಲ್ಲಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯಸಭೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ಶುದ್ಧ ನೈಟ್ರೋಜನ್ ಮಹತ್ವವೇನು?
•ಆಮ್ಲಜನಕ, ನೀರಿನ ಕಣ, ಸಾರಜನಕ, ನಿಯಾನ್ ಅನಿಲಗಳ ಸಮ್ಮಿಶ್ರಣವಾದ ಸಾಮಾನ್ಯ ಗಾಳಿಯು ಟೈರಿನಿಂದ ಹೊರಹೋಗುತ್ತಲೇ ಇರುತ್ತದೆ. ಆದರೆ, ಸ್ವಚ್ಛ ನೈಟ್ರೋಜನ್ ಅನಿಲವು ತುಂಬಾ ದಿನ ಟೈರ್ನಲ್ಲಿ ಇರುವ ಮೂಲಕ ಟೈರ್ಗಳಿಗೆ ಸ್ಥಿರ ಒತ್ತಡ ನೀಡುತ್ತದೆ.
•ಸಾಮಾನ್ಯ ಗಾಳಿಯಲ್ಲಿನ ನೀರಿನ ಕಣಗಳು ಟೈರಿನ ಒಳಭಾಗದಲ್ಲಿ ತೇವದ ವಾತಾವರಣ ನಿರ್ಮಿಸುತ್ತವೆ. ಟೈರ್ನ ರಿಮ್ಗಳಿಗೆ ತುಕ್ಕು ಹಿಡಿವಂತೆ ಮಾಡಿ ಚಕ್ರಗಳನ್ನು ದುರ್ಬಲಗೊಳಿಸುತ್ತವೆ. ನೈಟ್ರೋಜನ್ನಿಂದ ಈ ಅಪಾಯವಿಲ್ಲ.
•ಟೈರುಗಳ ಘರ್ಷಣೆಯಿಂದ ಹಾಗೂ ಬಾಹ್ಯ ತಾಪಮಾನದಿಂದ ಸಾಮಾನ್ಯ ಗಾಳಿ ತುಂಬಲ್ಪಟ್ಟ ಟೈರುಗಳಲ್ಲಿ ಆಮ್ಲಜನಕ ಹಾಗೂ ರಬ್ಬರ್ನ ನಡುವೆ ರಾಸಾಯನಿಕ ಕ್ರಿಯೆ ನಡೆಯಲು ಅವಕಾಶವಿದೆ. ನೈಟ್ರೋಜನ್ ಟೈರುಗಳಲ್ಲಿ ಆ ಅಪಾಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!