ಮೀಸಲಾತಿ ನಿಧಿ ಪ್ರಸ್ತಾವನೆ ಆಯೋಗಕ್ಕೆ ರವಾನೆ
Team Udayavani, Mar 14, 2019, 12:45 AM IST
ಹೊಸದಿಲ್ಲಿ: ಮೀಸಲಾತಿ ರಹಿತ ಸಮುದಾಯದ ಬಡವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ. 10ರಷ್ಟು ಮೀಸಲಾತಿಯ ನಿಯಮವನ್ನು ಜಾರಿಗೊಳಿಸಲು ತನಗೆ ಅಗತ್ಯವಿರುವ 4,200 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕೆಂದು ಕೇಂದ್ರ ಸರಕಾರ, ಚುನಾವಣ ಆಯೋಗಕ್ಕೆ ಮನವಿ ಮಾಡಿದೆ.
ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಜಾರಿಗೆ ತರಲು 4,200 ಕೋಟಿ ರೂ.ಗಳ ಅವಶ್ಯಕತೆಯಿದೆ ಎಂಬ ಪ್ರಸ್ತಾವನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಚ್ಆರ್ಡಿ), ಕೇಂದ್ರ ಸಂಪುಟಕ್ಕೆ ಸಲ್ಲಿಸಿತ್ತು. ಮಾ. 10ರಂದು ಚುನಾವಣೆ ಘೋಷಣೆಯಾಗುವ ಮುನ್ನ ಕೆಲವಾರು ಬಾರಿ ಸಂಪುಟ ಸಭೆ ನಡೆದಿದ್ದರೂ, ಅಲ್ಲಿ ಬೇರೆ ಅತಿ ಮುಖ್ಯ ವಿಚಾರಗಳು ಪ್ರಸ್ತಾವವಾಗಿದ್ದರಿಂದ ಎಚ್ಆರ್ಡಿ ಪ್ರಸ್ತಾವನೆ ಚರ್ಚೆಗೆ ಬಂದಿರಲಿಲ್ಲ. ಈಗ ಚುನಾವಣ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಸಂಪುಟದಲ್ಲಿ ಅನುಮೋದನೆಗೊಳ್ಳದೆ ಇದ್ದ ಎಚ್ಆರ್ಡಿ ಪ್ರಸ್ತಾವನೆಯನ್ನು ಸಂಪುಟ ಕಾರ್ಯದರ್ಶಿ ಚುನಾವಣ ಆಯೋಗಕ್ಕೆ ರವಾನಿಸಿದ್ದಾರೆ.