8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್!
ಉಗ್ರರಿಂದ ಟಾರ್ಗೆಟೆಡ್ ದಾಳಿ ಹಿನ್ನೆಲೆ ಈ ಕ್ರಮ; ಕಣಿವೆಯಲ್ಲಿ ಕಟ್ಟೆಚ್ಚರ ವಹಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆ
Team Udayavani, Oct 22, 2021, 9:15 PM IST
ಶ್ರೀನಗರ: ಕಳೆದ ಎರಡು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ “ನಾಗರಿಕರನ್ನು ಗುರಿಯಾಗಿಸಿ ಹತ್ಯೆ’ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಣಿವೆಯ ರಸ್ತೆಗಳಲ್ಲಿ ಸೆಕ್ಯೂರಿಟಿ ಬಂಕರ್ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಹೆಚ್ಚಿನ ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗಿದೆ.
ಈ ಮೂಲಕ, ಕೇಂದ್ರ ಸಶಸ್ತ್ರ ಅರೆಸೇನಾಪಡೆ (ಸಿಎಪಿಎಫ್) ಯೋಧರನ್ನು ಒಳಗೊಂಡ ಭದ್ರತಾ ಬಂಕರ್ಗಳು ಶ್ರೀನಗರದ ರಸ್ತೆಗಳಲ್ಲಿ ಸುಮಾರು 8 ವರ್ಷಗಳ ಬಳಿಕ ಮರುನಿಯೋಜನೆಗೊಂಡಂತಾಗಿದೆ. ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಗೊಂಡ ಹಿನ್ನೆಲೆಯಲ್ಲಿ 2011 ಮತ್ತು 2014ರ ಮಧ್ಯೆ ಈ ಎಲ್ಲ ಬಂಕರ್ಗಳನ್ನೂ ತೆರವು ಮಾಡಲಾಗಿತ್ತು. ಈಗ ಮತ್ತೆ ಸಮಸ್ಯೆ ತಲೆದೋರಿರುವ ಕಾರಣ ಇವುಗಳನ್ನು ಮರುನಿಯೋಜಿಸಲಾಗಿದೆ.
ಏಕೆ ಬೇಕು ಈ ಬಂಕರ್?:
ಉಗ್ರರ ಮುಕ್ತ ಸಂಚಾರಕ್ಕೆ ತಡೆಯೊಡ್ಡುವುದೇ ಇದರ ಉದ್ದೇಶ. ಉಗ್ರರು ನಾಗರಿಕರ ಮೇಲೆ ದಾಳಿ ನಡೆಸಿ ಕ್ಷಣಮಾತ್ರದಲ್ಲೇ ಆ ಸ್ಥಳದಿಂದ ಮತ್ತೂಂದೆಡೆಗೆ ತೆರಳುತ್ತಾರೆ. ಅವರು ಈ ರೀತಿ ಮುಕ್ತವಾಗಿ ಸಂಚರಿಸುವುದನ್ನು ತಡೆಯುವುದಕ್ಕಾಗಿ ಬಂಕರ್ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿ ಅರೆಸೇನಾ ಪಡೆಯ 50 ಕಂಪನಿಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ
ನಿರ್ಗತಿಕನ ಶವ ಪತ್ತೆ
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಶುಕ್ರವಾರ ಸ್ಥಳೀಯೇತರ ನಿರ್ಗತಿಕನೊಬ್ಬರ ಮೃತದೇಹ ಪತ್ತೆಯಾಗಿದೆ. ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಇದು ಉಗ್ರರ ಕೃತ್ಯವೇ ಎಂಬುದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.