ಸಚಿವ ಅರುಣ್ ಜೇಟ್ಲಿ ಕ್ಷಮೆ ಕೇಳಿದ ಕೇಜ್ರಿವಾಲ್
Team Udayavani, Apr 3, 2018, 7:00 AM IST
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಹಣಕಾಸು ಅವ್ಯವಹಾರ ಆರೋಪ ಮಾಡಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಇದೀಗ ಕ್ಷಮೆ ಕೇಳಿದ್ದು, ಕೇಜ್ರಿವಾಲ್ ವಿರುದ್ಧ ಜೇಟ್ಲಿ ದಾಖಲಿಸಿದ್ದ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಿಂಪಡೆಯಲು ಜೇಟ್ಲಿ ನಿರ್ಧರಿಸಿದ್ದಾರೆ. ಮೊಕದ್ದಮೆ ಹಿಂಪಡೆಯಲು ಇಬ್ಬರೂ ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ತಮ್ಮ ವಿರುದ್ಧ ಮಾನನಷ್ಟ ಮೊಕದ್ದೆಮೆ ಹಾಕಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪಂಜಾಬ್ ಮಾಜಿ ಸಚಿವ ವಿಕ್ರಮ್ ಸಿಂಗ್ ಮಜಿತಿಯಾ ಕ್ಷಮೆ ಕೇಳಿದ್ದರು ಕೇಜ್ರಿವಾಲ್ .
ಜೇಟ್ಲಿ ವಿಚಾರದಲ್ಲಿ, ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ಗೆ ಜೇಟ್ಲಿ ಅಧ್ಯಕ್ಷರಾಗಿದ್ದಾಗ ಹಣಕಾಸು ಅಕ್ರಮ ನಡೆಸಿದ್ದಾರೆ ಎಂದು ಕೇಜ್ರಿವಾಲ್ 2015ರಲ್ಲಿ ಆರೋಪಿಸಿದ್ದರು. ಕೇಜ್ರಿವಾಲ್ ಜತೆಗೆ, ಎಎಪಿ ಮುಖಂಡರಾದ ಸಂಜಯ್ ಸಿಂಗ್, ರಾಘವ ಛಡ್ಡಾ, ಆಶುತೋಷ್, ದೀಪಕ್ ಬಾಜ್ಪೆ„ ಮತ್ತು ಕುಮಾರ್ ವಿಶ್ವಾಸ್ ವಿರುದ್ಧ ಕೂಡ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಇವರಲ್ಲಿ ಕುಮಾರ್ ವಿಶ್ವಾಸ್ಹೊರತುಪಡಿಸಿ ಉಳಿದವರೆಲ್ಲರೂ ಕೇಜ್ರಿ ಜತೆಗೇ ಕ್ಷಮೆ ಕೇಳಿದ್ದಾರೆ.