ಇಂಡೋ ಟಿಬೆಟಾನ್ ಬಾರ್ಡರ್ ಪೊಲೀಸ್ ಬಸ್ಸು ಅವಘಡ: 1ಸಾವು, 34 ಜಖಂ
Team Udayavani, Dec 24, 2018, 11:26 AM IST
ಶ್ರೀನಗರ : ಜಮ್ಮು ಕಾಶ್ಮೀರದ ರಾಮಬನ ಜಿಲ್ಲೆಯ ಖೂನಿ ನಲ್ಲಾ ಎಂಬಲ್ಲಿಗೆ ಸಮೀಪದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಡೋ ಟಿಬೆಟಾನ್ ಬಾರ್ಡರ್ ಪೊಲೀಸ್ (ITBP) ಸಿಬಂದಿಗಳಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಕಾರಣ ಓರ್ವ ಸಿಬಂದಿ ಮೃತಪಟ್ಟು ಇತರ 24 ಮಂದಿ ಗಾಯಗೊಂಡ ಘಟನೆ ಇಂದು ಸೋಮವಾರ ನಡೆದಿದೆ.
ಪೊಲೀಸರು ತಿಳಿಸಿರುವ ಪ್ರಕಾರ ಜಮ್ಮು ಕಡೆಗೆ ಹೋಗುತ್ತಿದ್ದ ಬಸ್ಸಿನಲ್ಲಿ 35 ಮಂದಿ ಸಿಬಂದಿ ಇದ್ದರು. ಬೆಳಗ್ಗೆ 8.45ರ ಸುಮಾರಿಗೆ ಬಸ್ಸು ಖೂನಿ ನಲ್ಲಾ ಸಮೀಪ ಆಳವಾದ ಕಂದರಕ್ಕೆ ಉರುಳಿ ಬಿತ್ತು. ಮರಗಳು ತಡೆದ ಕಾರಣ ಬಸ್ಸು ಇನ್ನಷ್ಟು ಆಳಕ್ಕೆ ಬೀಳುವುದು ತಪ್ಪಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸುದ್ದಿ ತಿಳಿದಾಕ್ಷಣ ಸೇನೆ, ಪೊಲೀಸರು ಮತ್ತು ಸ್ಥಳೀಯ ರಕ್ಷಣಾ ಕಾರ್ಯಕರ್ತರನ್ನು ಒಳಗೊಂಡ ತಂಡ ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣೆಗೆ ನೆರವಾದರು.
ಗಾಯಳುಗಳನ್ನು ರಾಮಬನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಹೆಲಿಕಾಪ್ಟರ್ನಲ್ಲಿ ಜಮ್ಮುಗೆ ಸಾಗಿಸಲಾಗಿದೆ ಎಂದು ರಾಮಬನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.