ಕಸ್ಟಡಿಯಲ್ಲಿ ತಂದೆ, ಮಗನ ಸಾವು ಪ್ರಕರಣ: ಎಸ್ ಐ ಸೇರಿದಂತೆ ನಾಲ್ವರ ಬಂಧನ
ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದ ವೇಳೆ ಅಂಗಡಿ ತೆರೆದಿದ್ದ ಪಿ.ಜಯರಾಜ್(ತಂದೆ) ಯನ್ನು ಪೊಲೀಸರು ಬಂಧಿಸಿದ್ದರು.
Team Udayavani, Jul 2, 2020, 11:15 AM IST
Jayaraj-Fennix
ಚೆನ್ನೈ: ಇತ್ತೀಚೆಗೆ ತಮಿಳುನಾಡಿನ ಟುಟಿಕೊರಿಯನ್(ತೂತುಕುಡಿ) ಪೊಲೀಸ್ ಠಾಣೆಯಲ್ಲಿಯೇ ಸಾವನ್ನಪ್ಪಿದ್ದ ತಂದೆ, ಮಗನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಲಾಕಪ್ ನಲ್ಲಿ ಇರುವಾಗಲೇ ಪೈಶಾಚಿಕವಾಗಿ ಹಿಂಸೆ ನೀಡಿದ್ದರಿಂದ ತಂದೆ, ಮಗ ಸಾವನ್ನಪ್ಪಿದ್ದಾರೆಂದು ಗಂಭೀರವಾಗಿ ಆರೋಪಿಸಲಾಗಿದ್ದು, ಈ ಪ್ರಕರಣ ಬಿಸಿ, ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದಂತಾಗಿದೆ ಎಂದು ವರದಿ ವಿವರಿಸಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದ ವೇಳೆ ಅಂಗಡಿ ತೆರೆದಿದ್ದ ಪಿ.ಜಯರಾಜ್(ತಂದೆ) ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಮಗ ಫೆನ್ನಿಕ್ಸ್ ಠಾಣೆಗೆ ತೆರಳಿ ತಂದೆಯ ಬಿಡುಗಡೆಗೆ ಮನವಿ ಮಾಡಿದ್ದ. ಆದರೆ ಇಬ್ಬರನ್ನೂ ಬಂಧಿಸಿದ ಪೊಲೀಸರು ದೈಹಿಕ ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ.
ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ತಂದೆ, ಮಗ ಕೋವಿಲ್ ಪಟ್ಟಿ ಕಾರಾಗೃಹದಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣ ತಮಿಳುನಾಡಿನಲ್ಲಿ ತೀವ್ರ ಕೋಲಾಹಲ, ಚರ್ಚೆಗೆ ಗ್ರಾಸವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಗ್ರಹಿಸಿದ್ದರು.