ಗೋ ರಕ್ಷಕರಿಗೆ ಕೇಂದ್ರದ ಪರೋಕ್ಷ ಕುಮ್ಮಕ್ಕಿದೆ; ಲೋಕಸಭೇಲಿ ಖರ್ಗೆ
Team Udayavani, Jul 31, 2017, 1:34 PM IST
ನವದೆಹಲಿ: ಗೋ ರಕ್ಷಕರ ಹೆಸರು ಹೇಳಿಕೊಂಡು ದೇಶದಲ್ಲಿ ಗೂಂಡಾಗಿರಿ ನಡೆಸಲಾಗುತ್ತಿದೆ. ಆಡಳಿತಾರೂಢ ಎನ್ ಡಿಎ ಸರ್ಕಾರ ಪರೋಕ್ಷವಾಗಿ ಬಲಪಂಥೀಯ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗಂಭೀರವಾಗಿ ಆರೋಪಿಸಿದರು.
ಸೋಮವಾರ ಲೋಕಸಭೆ ಕಲಾಪದಲ್ಲಿ ಗುಂಪು ಹಲ್ಲೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋ ರಕ್ಷಣೆಯ ಹೆಸರಿನಲ್ಲಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸುತ್ತಿರುವುದಾಗಿ ದೂರಿದರು.
ಕೇಂದ್ರ ಸರ್ಕಾರ ಕೂಡಾ ವಿಎಚ್ ಪಿ, ಬಜರಂಗದಳ ಸೇರಿದಂತೆ ಗೋ ರಕ್ಷಕರನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ. ಅಲ್ಲದೇ ಕಳೆದ ಮೂರು ವರ್ಷಗಳಲ್ಲಿ ನಡೆದ ಸರಣಿ ದಾಳಿ ಕುರಿತ ಪಟ್ಟಿಯನ್ನು ಕಲಾಪದಲ್ಲಿ ಓದಿದರು.
ಇಂದು ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ದಾಳಿ ನಡೆಸಲಾಗುತ್ತಿದೆ. ಹಿಂದುಗಳೇ ಹಿಂದುವನ್ನು ಕೊಲ್ಲುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಮುಸ್ಲಿಮರನ್ನು ಹತ್ಯೆಗೈಯುತ್ತಿದ್ದಾರೆ. ಯಾಕೆ ಇಂತಹ ಘಟನೆಗಳು ನಡೆಯುತ್ತಿವೆ. ಯಾಕೆಂದರೆ ನೀವು (ಬಿಜೆಪಿ) ನಿಮ್ಮ ಸಿದ್ದಾಂತವನ್ನು ಹೇರಲು ಯತ್ನಿಸುತ್ತಿರುವುದರಿಂದ ಇವೆಲ್ಲ ನಡೆಯುತ್ತಿದೆ. ಹಾಗಾಗಿ ಈ ಘಟನೆಗಳ ಹಿಂದೆ ವಿಎಚ್ ಪಿ, ಬಜರಂಗದಳ ಕಾರ್ಯಕರ್ತರೇ ಇದ್ದಾರೆ ಎಂದು ನೇರವಾಗಿ ಆರೋಪಿಸುತ್ತೇನೆ ಎಂದರು.