ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಯಾಸಿನ್ ಮಲಿಕ್
ರುಬಯ್ಯ ಸಯೀದ್ ಅಪಹರಣ ಪ್ರಕರಣ
Team Udayavani, Jul 23, 2022, 6:50 PM IST
ನವದೆಹಲಿ : ರುಬಯ್ಯ ಸಯೀದ್ ಅಪಹರಣ ಪ್ರಕರಣದ ವಿಚಾರಣೆಗೆ ಜಮ್ಮು ನ್ಯಾಯಾಲಯದಲ್ಲಿ ದೈಹಿಕವಾಗಿ ಹಾಜರಾಗಲು ಅವಕಾಶ ನೀಡುವಂತೆ ಮಾಡಿದ ಮನವಿಗೆ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ತಿಹಾರ್ ಜೈಲಿನಲ್ಲಿ ಆರೋಪಿಯಾಗಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಮುಖ್ಯಸ್ಥ 56 ವರ್ಷದ ಮಲಿಕ್ ಈ ತಿಂಗಳ ಆರಂಭದಲ್ಲಿ ಬೆದರಿಕೆ ಹಾಕಿದ್ದ, ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದ್ದಾನೆ. ಜೈಲು ಅಧಿಕಾರಿಗಳು ಪದೇ ಪದೇ ಮನವಿ ಮಾಡಿದರೂ ಏನನ್ನೂ ತಿನ್ನಲು ನಿರಾಕರಿಸಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವನ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಸಿಬಿಐ ನ್ಯಾಯಾಧೀಶರ ಮುಂದೆ ಹಾಜರಾದ ಮಲಿಕ್, ಡಿಸೆಂಬರ್ 1989 ರಲ್ಲಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೈಹಿಕವಾಗಿ ಹಾಜರಾಗಲು ಬಯಸುವುದಾಗಿ ಹೇಳಿದ್ದ.
ರುಬಯ್ಯ ಸಯೀದ್ ಅವರನ್ನು 1989,ಡಿಸೆಂಬರ್ 8 ರಂದು ಜೆಕೆಎಲ್ಎಫ್ ನಿಂದ ಅಪಹರಿಸಲಾಗಿತ್ತು. ಐದು ದಿನಗಳ ನಂತರ ಡಿಸೆಂಬರ್ 13 ರಂದು ಕೇಂದ್ರದಲ್ಲಿ ಆಗಿನ ಬಿಜೆಪಿ ಬೆಂಬಲದ ವಿ. ಪಿ. ಸಿಂಗ್ ನೇತೃತ್ವದ ಸರಕಾರ, ಐದು ಜೆಕೆಎಲ್ಎಫ್ ಭಯೋತ್ಪಾದಕರನ್ನು ವಿನಿಮಯವಾಗಿ ಬಿಡುಗಡೆ ಮಾಡಿದ ನಂತರ ಆಕೆಯನ್ನು ಸೆರೆಯಿಂದ ಬಿಡುಗಡೆ ಮಾಡಲಾಗಿತ್ತು.