ಪ್ರಮುಖ ಪ್ರಕರಣ ವಿಚಾರಣೆ: ಸಿಜೆಐ ನಿರ್ಧಾರವೇ ಅಂತಿಮ
Team Udayavani, Nov 11, 2017, 7:00 AM IST
ನವದೆಹಲಿ: ಜಡ್ಜ್ ಗಳ ಹೆಸರಲ್ಲಿ ಲಂಚ ಕೇಳಿದ ಪ್ರಕರಣ ಸಂವಿಧಾನ ಪೀಠದಲ್ಲಿ ವಿಚಾರಣೆಯಾಗುವುದಿಲ್ಲ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಯವರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಹೇಳಿದೆ. ಈ ಮೂಲಕ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಿ ಬುಧವಾರ ದ್ವಿಸದಸ್ಯ ಪೀಠ ನೀಡಿದ ಆದೇಶ ರದ್ದು ಮಾಡಿತು. ಇಂಥ ವಿಚಾರಗಳಿಗೆ ಸಿಜೆಐ ನಿರ್ಧಾರವೇ ಅಂತಿಮ ಎಂದಿತು.
ವಿಚಾರಣೆಯ ಒಂದು ಹಂತದಲ್ಲಿ ಎನ್ಜಿಒ ಒಂದರ ಪರ ವಾದಿಸುತ್ತಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ತಮಗೆ ವಾದ ಮಂಡಿಸಲು ಮುಖ್ಯ ನ್ಯಾಯಮೂರ್ತಿಗಳು ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಕೋರ್ಟ್ ಹಾಲ್ನಿಂದ ಹೊರ ನಡೆದರು. ಮಧ್ಯಾಹ್ನ 3 ಗಂಟೆ ವೇಳೆ ತುರ್ತಾಗಿ ವಿಚಾರಣೆ ನಿಗದಿ ಮಾಡಿದ ನ್ಯಾ.ದೀಪಕ್ ಮಿಶ್ರಾ “ಇದೊಂದು ಗಂಭೀರ ಪ್ರಕರಣ. ದ್ವಿ ಸದಸ್ಯ ಅಥವಾ ತ್ರಿಸದಸ್ಯ ನ್ಯಾಯಪೀಠ ಇಂಥ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.