ಕಮಲ್ – ರಜನಿ ಜುಗಲ್ಬಂದಿ?
Team Udayavani, Nov 20, 2019, 6:47 AM IST
ಚೆನ್ನೈ: 2021ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕೈಜೋಡಿಸಿಕೊಂಡೇ ಅಖಾಡಕ್ಕಿಳಿಯಲಿದ್ದಾರೆಯೇ?
ರಜನಿ ಆಡಿರುವ ಮಾತುಗಳು ಇಂಥದ್ದೊಂದು ಅನುಮಾನ ಮೂಡಿಸಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿರುವ ರಜನಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ‘ತಮಿಳುನಾಡಿನ ಜನರ ಕ್ಷೇಮಾಭಿವೃದ್ಧಿಗಾಗಿ ನಾನು ಮತ್ತು ಕಮಲ್ ಹಾಸನ್ ಕೈಜೋಡಿಸಬೇಕಾದ ಪರಿಸ್ಥಿತಿ ಉದ್ಭವಿಸಿದ್ದೇ ಆದಲ್ಲಿ ಅದಕ್ಕೆ ನಾನು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಕಮಲ್ ಕೂಡ ಇಂಥದ್ದೇ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು.
ಇನ್ನೊಂದೆಡೆ, ತಮಿಳುನಾಡಿನಲ್ಲಿ ಪಳನಿ ಸ್ವಾಮಿ ಸಿಎಂ ಆಗಿದ್ದೇ ಪವಾಡ ಎಂದು ಛೇಡಿಸಿದ್ದ ಸೂಪರ್ಸ್ಟಾರ್ ರಜನಿಕಾಂತ್ಗೆ ಎಐಎಡಿಎಂಕೆ ಪಕ್ಷ ತಿರುಗೇಟು ನೀಡಿದೆ. ತನ್ನ ಮುಖವಾಣಿ ‘ನಮದು ಅಮ್ಮ’ ನಿಯತಕಾಲಿಕೆಯಲ್ಲಿ ತಿರುಗೇಟು ನೀಡಿರುವ ಎಐಎಡಿಎಂಕೆ, ‘ಬಸ್ ಕಂಡಕ್ಟರ್ ಆಗಿದ್ದ ನೀವೂ (ರಜನಿ) ಸೂಪರ್ಸ್ಟಾರ್ ಆಗುತ್ತೀರಿ ಎಂದು ಭಾವಿಸಿರಲಿಲ್ಲ’ ಎಂದಿದೆ.