ಜಮ್ಮು-ಕಾಶ್ಮೀರ: ಉಗ್ರರ ಬಂದ್ ಕರೆಗೆ ಬೆಂಬಲ ನೀಡದ ವ್ಯಕ್ತಿಯ ಕಾರಿಗೆ ಬೆಂಕಿ
Team Udayavani, Sep 18, 2019, 11:48 AM IST
ಜಮ್ಮು-ಕಾಶ್ಮೀರ: ಅಲ್ ಬದರ್ ಉಗ್ರಗಾಮಿ ಸಂಘಟನೆ ಕರೆ ನೀಡಿದ್ದ ಬಂದ್ ಗೆ ಬೆಂಬಲ ನೀಡದ ಕಾರಣಕ್ಕೆ ವ್ಯಕ್ತಿಯೊಬ್ಬರ ಕಾರನ್ನು ಬೆಂಕಿಹಚ್ಚಿ ಸುಟ್ಟುಹಾಕಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಲ್ಲಿ ನಡೆದಿದೆ.
ಬಶೀರ್ ಅಹ್ಮದ್ ಖಾನ್ ಎಂಬವರು ತನ್ನ ಮಾರುತಿ ಕಾರಿನಲ್ಲಿ ಹೋಗುತ್ತಿದ್ದಾಗ ಶಸ್ತ್ರ ಸಜ್ಜಿತ ನಾಲ್ವರು ಏಕಾಏಕಿ ಕಾರನ್ನು ಅಡ್ಡಗಟ್ಟಿ ಕೆಳಗಿಳಿಯುವಂತೆ ಹೇಳಿದ್ದರು. ತಾನು ತುರ್ತಾಗಿ ಹೋಗಬೇಕು ಎಂದು ವಿನಂತಿಸಿಕೊಂಡರೂ ಕೇಳದ ಉಗ್ರರು ಖಾನ್ ಅವರನ್ನು ಥಳಿಸಿರುವುದಾಗಿ ವರದಿ ತಿಳಿಸಿದೆ.
ನಾವು ಬಂದ್ ಗೆ ಕರೆ ಕೊಟ್ಟು ಎಲ್ಲೆಡೆ ಪೋಸ್ಟರ್ ಅಂಟಿಸಿದ್ದೇವೆ. ಎಲ್ಲರೂ ಅಂಗಡಿ, ಮುಂಗಟ್ಟು ಬಂದ್ ಮಾಡಿದ್ದಾರೆ. ಬಂದ್ ಇದ್ದರೂ ಯಾಕೆ ಕಾರು ಚಲಾಯಿಸಿಕೊಂಡು ಬಂದೆ ಎಂದು ಪ್ರಶ್ನಿಸಿದ್ದರು. ಏತನ್ಮಧ್ಯೆ ಬಶೀರ್ ಕಾರನ್ನು ಬಿಟ್ಟು ಓಡಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಉಗ್ರರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದಾಗಿ ಬಶೀರ್ ಆರೋಪಿಸಿದ್ದಾರೆ.
ಘಟನೆ ಸ್ಥಳಕ್ಕೆ ಸಿಆರ್ ಪಿಫ್, ಜಮ್ಮು ಕಾಶ್ಮೀರ ಪೊಲೀಸರು ಆಗಮಿಸಿದ್ದರು. ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗಳು ಬಂದು ಬೆಂಕಿಯನ್ನು ನಂದಿಸಿದ್ದರು. ಆದರೆ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಘಟನೆ ಬಗ್ಗೆ ಸೋಪೋರ್ ನ ವಾರ್ ಪೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.