ಕಾಶ್ಮೀರ: ರಾಜಕೀಯ ನಾಯಕರನ್ನು ಸರದಿ ಪ್ರಕಾರ ಬಿಡುಗಡೆ
Team Udayavani, Oct 4, 2019, 5:57 AM IST
ಜಮ್ಮು: ಜಮ್ಮುವಿನ ಬಳಿಕ ಇನ್ನು ಕಾಶ್ಮೀರ ಭಾಗದಲ್ಲಿರುವ ರಾಜಕೀಯ ನಾಯಕರನ್ನು ಒಬ್ಬೊಬ್ಬರನ್ನಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಫಾರೂಖ್ ಖಾನ್ ತಿಳಿಸಿದ್ದಾರೆ. ಪ್ರತಿ ವ್ಯಕ್ತಿಯ ರಾಜಕೀಯ ಹಿನ್ನೆಲೆ ಪರಿಶೀಲನೆ ಬಳಿಕ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಅ.24ರಂದು ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆ ನಡೆಯಲಿರುವಂತೆಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಆ.5ರಂದು ವಿಶೇಷ ಸ್ಥಾನಮಾನ ರದ್ದು ಮಾಡುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ 400ಕ್ಕೂ ಅಧಿಕ ಮಂದಿ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ 250ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ನಡುವೆ ಕಣಿವೆ ರಾಜ್ಯದ ಜನರಿಗೆ ಅಭಯ ನೀಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್, ಪ್ರತಿಯೊಬ್ಬ ಕಾಶ್ಮೀರದ ವ್ಯಕ್ತಿಯೂ ನಮ್ಮವರೇ. ಅವರ ಭೂಮಿ, ಸಂಸ್ಕೃತಿಯ ಹಿತಾಸಕ್ತಿಯನ್ನು ಮೋದಿ ಸರ್ಕಾರ ರಕ್ಷಿಸಲಿದೆ ಎಂದಿದ್ದಾರೆ.
ಕೇಂದ್ರಕ್ಕೆ ಸಾಳ್ವೆ ಶ್ಲಾಘನೆ: ಸಂವಿಧಾನದ 370ನೇ ವಿಧಿ ದುರದೃಷ್ಟಕರ. ಅದನ್ನು ಹಿಂಪಡೆಯಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ಹೇಳಿದ್ದಾರೆ. ಲಂಡನ್ನಲ್ಲಿ ಮಾತನಾಡಿದ ಅವರು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಪಾಕಿಸ್ತಾನ ವಿವೇಚನೆ ಇಲ್ಲದೆ ಪ್ರತಿಕ್ರಿಯೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎನ್ನುವುದೇ ಭಾರತದ್ದು. ಅವರು ಅದನ್ನು ಆಕ್ರಮಿಸಿಕೊಂಡಿದ್ದಾರೆ. ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಇಂಥ ನಿರ್ಧಾರವನ್ನು ಮೊದಲೇ ಕೈಗೊಳ್ಳಬೇಕಾಗಿತ್ತು. ಈಗ ಕೈಗೊಂಡಿರುವ ತೀರ್ಮಾನ ಸರಿಯಾಗಿಯೇ ಇದೆ ಎಂದು ಶ್ಲಾ ಸಿದ್ದಾರೆ.
ಇಂದು ಪಾಕ್ ಸೇನೆ ಪ್ರಾಯೋಜಿತ ಪಾದಯಾತ್ರೆ
ನವದೆಹಲಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಳಿಸಿಕೊಳ್ಳಲು ವಿಫಲವಾ ಗಿರುವ ಪಾಕಿಸ್ತಾನ ಮತ್ತೂಂದು ದುಸ್ಸಾಹಸಕ್ಕೆ ಮುಂದಾಗಿದೆ. ಪಾಕಿಸ್ತಾನ ಸೇನೆಯೇ ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯರಿಗೆ ಕುಮ್ಮಕ್ಕು ನೀಡಿ, ಗಡಿ ನಿಯಂತ್ರಣ ರೇಖೆಯತ್ತ ಶುಕ್ರವಾರ ಪಾದಯಾತ್ರೆ ಆಯೋಜಿಸಲಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ತೊಂದರೆ ನೀಡುವ ಪ್ರಯತ್ನ ಮಾಡಲು ಮುಂದಾಗಿದೆ. ಈ ನಡುವೆ, ಯಾವುದೇ ದುಸ್ಸಾಹಸಕ್ಕೂ ತಕ್ಕ ಪ್ರತ್ಯುತ್ತರ ನೀಡಲು ಪಾಕ್ ಸೇನೆ ಸಿದ್ಧವಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ಜ.ಬಾಜ್ವಾ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂ ಸಿ ಪೂಂಛ…, ರಜೌರಿ ಮತ್ತು ಕಥುವಾಗಳಲ್ಲಿ ಗುಂಡು ಹಾರಾಟ ನಡೆಸಿದೆ.