ನೂತನ ಸಂಸತ್ ಕಟ್ಟಡವನ್ನು ಅಲಂಕರಿಸಲು ಸಾಂಪ್ರದಾಯಿಕ ಕಾಶ್ಮೀರಿ ಕಾರ್ಪೆಟ್ಗಳು ಸಿದ್ದ
ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ರತ್ನಗಂಬಳಿಗಳ ಪುನಶ್ಚೇತನಗೊಳ್ಳುವ ಕನಸು..
Team Udayavani, Sep 4, 2022, 5:10 PM IST
ಶ್ರೀನಗರ: ಕೈಯಿಂದ ನೆಯ್ದ ಸಾಂಪ್ರದಾಯಿಕ ಕಾಶ್ಮೀರಿ ಕಾರ್ಪೆಟ್ಗಳು ರಾಷ್ಟ್ರ ರಾಜಧಾನಿಯ ನೂತನ ಸಂಸತ್ತಿನ ಕಟ್ಟಡವನ್ನು ಅಲಂಕರಿಸಲು ಸಿದ್ಧವಾಗಿವೆ. ಬುದ್ಗಾಮ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಕಲಾವಿದರು ಕೆಲಸ ಪೂರ್ಣಗೊಳಿಸುವ ಅಂತಿಮ ಹಂತದಲ್ಲಿದ್ದಾರೆ.
ಮಧ್ಯ ಕಾಶ್ಮೀರ ಜಿಲ್ಲೆಯ ಖಾಗ್ನಲ್ಲಿ 50 ನೇಕಾರರು ಮತ್ತು ಕುಶಲಕರ್ಮಿಗಳ ಗುಂಪು ಕಳೆದೊಂದು ವರ್ಷದಿಂದ ಹೊಸ ದೆಹಲಿ ಮೂಲದ ಕಂಪನಿಯು ಅವರಿಗೆ ನೀಡಿದ ಯೋಜನೆಯನ್ನು ಪೂರ್ಣಗೊಳಿಸಲು ಕೆಲಸ ಮಾಡುತ್ತಿದೆ.
ನರೇಂದ್ರ ಮೋದಿ ಅವರ ಸರಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಂಸತ್ತಿನ ಹೊಸ ಕಟ್ಟಡದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸರಕಾರ ಹೇಳಿದೆ.
ನಾವು ಮಾದರಿಗಳನ್ನು ಸಲ್ಲಿಸಿದ ನಂತರ ಹೊಸ ಸಂಸತ್ತಿನ ಕಟ್ಟಡಕ್ಕಾಗಿ ನಾವು ಕಳೆದ ವರ್ಷ ಅಕ್ಟೋಬರ್ನಲ್ಲಿ ಕಂಪನಿಯಿಂದ 12 ಕಾರ್ಪೆಟ್ಗಳ ಆರ್ಡರ್ ಸ್ವೀಕರಿಸಿದ್ದೇವೆ ಎಂದು ತಾಹಿರಿ ಕಾರ್ಪೆಟ್ಸ್ನ ಕಮರ್ ಅಲಿ ಖಾನ್ ಪಿಟಿಐಗೆ ತಿಳಿಸಿದ್ದಾರೆ.
32 ವರ್ಷಗಳಿಂದ ರತ್ನಗಂಬಳಿಗಳನ್ನು ತಯಾರಿಸುವ ಮತ್ತು ರಫ್ತು ಮಾಡುವ ಘಟಕವನ್ನು ನಡೆಸುತ್ತಿರುವ ಖಾನ್, ಸಂಸತ್ತಿಗೆ ಕಾರ್ಪೆಟ್ಗಳನ್ನು ತಯಾರಿಸುವುದು ಗೌರವ ಮತ್ತು ಅಪಾರ ಸಂತೋಷದ ವಿಷಯ ಎಂದು ಹೇಳಿದ್ದಾರೆ.
ನಮ್ಮ ಕೈಯಿಂದ ಮಾಡಿದ ರತ್ನಗಂಬಳಿಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಆದರೆ ದುರದೃಷ್ಟವಶಾತ್, ಹಲವು ಕಾರಣಗಳಿಂದ ಬೇಡಿಕೆಯಲ್ಲಿ ಕುಸಿತ ಕಂಡುಬಂದಿದೆ. ಈಗ, ಅದು ಪುನಶ್ಚೇತನಗೊಳ್ಳುತ್ತದೆ ಮತ್ತು ಈ ಯೋಜನೆಯು ಅದಕ್ಕೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಹೊಸ ಸಂಸತ್ ಕಟ್ಟಡವನ್ನು ಅಲಂಕರಿಸುವ ಕಾರ್ಪೆಟ್ಗಳು 11 ಅಡಿ ಉದ್ದ ಮತ್ತು 8 ಅಡಿ ಅಗಲವಿದೆ. ಅವುಗಳನ್ನು ವೃತ್ತಾಕಾರದ ರಚನೆಯಲ್ಲಿ ಹಾಕಲಾಗುತ್ತದೆ. ಪ್ರತಿ ಕಾರ್ಪೆಟ್ ನ ಅಗಲವು ಒಂದೇ ಆಗಿರುವುದಿಲ್ಲ. ಇದು ಬದಲಾಗುತ್ತದೆ, ಇದು ಕಡಿಮೆ ಅಗಲದಿಂದ ಪ್ರಾರಂಭವಾಗುತ್ತದೆ ಮತ್ತು ದೊಡ್ಡದಾಗುತ್ತದೆ ಎಂದು ಖಾನ್ ಹೇಳಿದ್ದಾರೆ.
ಕಾರ್ಪೆಟ್ಗಳು ವಿಶಿಷ್ಟವಾಗಿದ್ದು, ಮೂರು ವಿನ್ಯಾಸಗಳನ್ನು ಸಾಂಪ್ರದಾಯಿಕ ಕಾಶ್ಮೀರಿ ಕಣಿ’ ಶಾಲ್ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಐವತ್ತು ಮಂದಿ ನೇಕಾರರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, 12 ಕುಟುಂಬಗಳು ಕಚ್ಚಾವಸ್ತು ಪೂರೈಕೆ, ವಿನ್ಯಾಸ, ನೇಯ್ಗೆ ಇತ್ಯಾದಿಗಳೊಂದಿಗೆ ತೊಡಗಿಸಿ ಕೊಂಡಿವೆ ಎಂದು ಖಾನ್ ಹೇಳಿದರು.
ಯೋಜನೆಯ 90 ರಷ್ಟು ಕೆಲಸ ಪೂರ್ಣಗೊಂಡಿದೆ ಮತ್ತು ಉಳಿದ ಕೆಲಸಕ್ಕೆ ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಖಾನ್ ಹೇಳಿದ್ದಾರೆ.