ಕನ್ನಡದ “ಸರಹಪಾದ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ
Team Udayavani, Sep 19, 2021, 6:45 AM IST
ಹೊಸದಲ್ಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ ಅನುವಾದಿತ ಕೃತಿಗಳಿಗೆ ಪ್ರಶಸ್ತಿ ಪ್ರಕಟಿಸಿದ್ದು, ಕನ್ನಡದ ಒಂದು ಕೃತಿ ಗೌರವಕ್ಕೆ ಪಾತ್ರವಾಗಿದೆ.
ತುಮಕೂರಿನ ಸಂಸ್ಕೃತಿ ಸಂಶೋಧಕರಾದ ಎಸ್. ನಟರಾಜು ಬೂದಾಳು ಅವರ ದೋಹೆಗಳ ಅನುವಾದಿತ ಸಂಗ್ರಹ “ಸರಹಪಾದ’ ಎಂಬ ಕೃತಿಗೆ ಪ್ರಶಸ್ತಿ ಸಂದಿದೆ. 50 ಸಾವಿರ ರೂ. ನಗದು, ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.
ಈ ಬಾರಿ ಇನ್ನೊಂದು ವಿಶೇಷವೆಂದರೆ, ಪರಭಾಷೆಗಳಿಗೆ ಅನುವಾದ ಕಂಡಿದ್ದ ಕನ್ನಡದ 4 ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಗೋಪಾಲಕೃಷ್ಣ ಪೈ ಅವರ ಕನ್ನಡ “ಸಪ್ನ ಸಾರಸ್ವತ’ ಕಾದಂಬರಿಯನ್ನು ಕೊಂಕಣಿಗೆ ಅನುವಾದಿಸಿದ್ದ ಜಯಶ್ರೀ ಶಾನಭಾಗರ “ಸಪ್ನ ಸಾರಸ್ವತ’, ಚಂದ್ರಶೇಖರ ಕಂಬಾರರ “ಶಿಖರಸೂರ್ಯ’ದ ಮಲಯಾಳ ಅನುವಾದ (ಶಿಖರಸೂರ್ಯನ್- ಸುಧಾಕರನ್ ರಾಮನಾಥಲಿ), ಶಾಂತಿನಾಥ ದೇಸಾಯಿ ರಚಿತ “ಓಂ ನಮೋ’ ದ ತೆಲುಗು ಅನುವಾದ (ಓಂ ನಮೋ- ರಂಗನಾಥ ರಾಮಚಂದ್ರ ರಾವ್), ವಿವೇಕ್ ಶಾನಭಾಗರ “ಘಾಚರ್ ಘೋಚರ್’ ಕಥಾಸಂಕಲನದ ಇಂಗ್ಲಿಷ್ ಅನುವಾದದ (ಘಾಚರ್ ಘೋಚರ್- ಶ್ರೀನಾಥ್ ಪೆರೂರ್) ಕೃತಿಗಳಿಗೆ ಪ್ರಶಸ್ತಿ ಸಂದಿದೆ.
ತೀರ್ಪುಗಾರರಾಗಿ ಕನ್ನಡ ಭಾಷೆಯಿಂದ ಚಂದ್ರಕಾಂತ ಪೋಕಳೆ, ಪ್ರೊ| ಲಕ್ಷ್ಮೀ ಚಂದ್ರಶೇಖರ್, ಪ್ರೊ| ಒ.ಎಲ್. ನಾಗಭೂಷಣ ಸ್ವಾಮಿ ಪ್ರತಿನಿಧಿಸಿದ್ದರು.