200 ರೂ. ಸಾಲ ವಾಪಸ್ ಕೊಡಲು 30 ವರ್ಷದ ಬಳಿಕ ಭಾರತಕ್ಕೆ ಬಂದ ಕೀನ್ಯಾ ಪ್ರಜೆ!
Team Udayavani, Jul 11, 2019, 2:22 PM IST
ನವದೆಹಲಿ:ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ ಎಂಬ ಗಾದೆ ಮಾತೊಂದಿದೆ. ಹೌದು ಇದನ್ನು ಸಾಲಗಾರರ ವಿಚಾರದಲ್ಲಿ ಹೆಚ್ಚಾಗಿ ಬಳಸುವ ಗಾದೆಯಾಗಿದೆ. ಆದರೆ ಇಲ್ಲೊಂದು ಅಪರೂಪದ ಘಟನೆ ವರದಿಯಾಗಿದೆ. ಸುಮಾರು 30 ವರ್ಷಗಳ ಹಿಂದೆ ಪಡೆದಿದ್ದ ಕೇವಲ 200 ರೂಪಾಯಿ ಸಾಲವನ್ನು ವಾಪಸ್ ಕೊಡಲು ಕೀನ್ಯಾದಿಂದ ಭಾರತಕ್ಕೆ ಆಗಮಿಸಿ ಸಾಲ ತೀರಿಸಿದ್ದಾರೆ!
30 ವರ್ಷಗಳ ಹಿಂದಿನ ಸಾಲ!
ರಿಚರ್ಡ್ ಟೋಂಗಿ ಕೀನ್ಯಾ ಪ್ರದೇಶ. ಈಗ ಕೀನ್ಯಾ ನೈರಿಬಾರಿ ಛಾಂಚೆ ಕ್ಷೇತ್ರದ ಸಂಸದರಾಗಿದ್ದಾರೆ. 30 ವರ್ಷಗಳ ಹಿಂದೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಶೀನಾಥ್ ಗೌಳಿ ಎಂಬವರ ಬಳಿ 200 ರೂಪಾಯಿ ಸಾಲ ಪಡೆದಿದ್ದರಂತೆ!
ಇದೀಗ ಕಾಶೀನಾಥ್ ಗೌಳಿಗೆ 70 ವರ್ಷ..ರಿಚರ್ಡ್ ತಾಂಗಿ ಮತ್ತು ಪತ್ನಿ ಮಿಚೆಲ್ಲೆ ದಿಢೀರ್ ಎಂಬಂತೆ ಬಂದು ಮನೆ ಬಾಗಿಲನ್ನು ತಟ್ಟಿದ್ದರು. ಬಾಗಿಲು ತೆಗದು ನೋಡಿದಾಗ ಯಾರೋ ಅಪರಿಚಿತರು. ಯಾಕೆಂದರೆ ಇದು 30 ವರ್ಷಗಳ ಹಿಂದಿನ ಕಥೆ. ಅದನ್ನು ಅವರೆಲ್ಲ ಮರೆತು ಬಿಟ್ಟಿದ್ದರು.
ಆದರೆ ರಿಚರ್ಡ್ ಹಳೆಯ ಕಥೆಯನ್ನು ನೆನಪಿಸಿ, ತಾನು ವಿದ್ಯಾರ್ಥಿಯಾಗಿದ್ದಾಗ ಔರಂಗಬಾದ್ ನಲ್ಲಿ ವಾಸಿಸಿದ್ದು, 200 ರೂಪಾಯಿ ಸಾಲ ಪಡೆದಿರುವುದನ್ನು ನೆನಪಿಸಿದಾಗ ನನ್ನ ಕಣ್ಣುಗಳನ್ನೇ ನನಗೆ ನಂಬಲಾಗಲಿಲ್ಲ ಎಂದು ಕಾಶೀನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.!
1985-1989ರಲ್ಲಿ ರಿಚರ್ಡ್ ಔರಂಗಬಾದ್ ಸ್ಥಳೀಯ ಕಾಲೇಜ್ ನಲ್ಲಿ ಮ್ಯಾನೇಜ್ ಮೆಂಟ್ ಕೋರ್ಸ್ ಕಲಿಯುತ್ತಿದ್ದರು. ಈ ಸಂದರ್ಭದಲ್ಲಿ ರಿಚರ್ಡ್ ಗೌಳಿ ಕುಟುಂಬದ ಸಂಪರ್ಕಕ್ಕೆ ಬಂದಿದ್ದರು. ಕೀನ್ಯಾದ ಬಡ ಕುಟುಂಬದಲ್ಲಿ ಜನಿಸಿದ್ದ ರಿಚರ್ಡ್ ಗೆ ಗೌಳಿ ಕುಟುಂಬದಿಂದ ನೆರವು ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
“ನಾನು ಔರಂಗಬಾದ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗ, ನನ್ನ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲವಾಗಿತ್ತು. ಆ ಸಂದರ್ಭದಲ್ಲಿ ಈ (ಗೌಳಿ ಕುಟುಂಬ) ಜನರೇ ನನಗೆ ಸಹಾಯ ಮಾಡಿದ್ದು. ಅಂದೇ ನಾನು ಒಂದು ಸಂಕಲ್ಪ ಮಾಡಿದ್ದೆ, ನಾನು ಭಾರತಕ್ಕೆ ವಾಪಸ್ ಬಂದು ಹಣವನ್ನು ವಾಪಸ್ ಕೊಡಬೇಕು ಎಂಬುದಾಗಿ. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದೊಂದು ನನಗೆ ಭಾವನಾತ್ಮಕ ಕ್ಷಣವಾಗಿದೆ ಎಂದು ರಿಚರ್ಡ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದರು.
ಔರಂಗಬಾದ್ ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಕೀನ್ಯಾಕ್ಕೆ ಹಿಂದಿರುಗಿದ ಮೇಲೆ ರಿಚರ್ಡ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಬಳಿಕ ಇದೀಗ ಕೀನ್ಯಾ ಸಂಸತ್ ನಲ್ಲಿ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಭಾರತಕ್ಕೆ ಬಂದಾಗ ಗೌಳಿ ಕುಟುಂಬವನ್ನು ಭೇಟಿಯಾಗುವ ಮತ್ತು ಬಾಕಿ ಪಾವತಿಸಬೇಕು ಎಂಬ ಇಚ್ಛೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲವಾಗಿತ್ತಂತೆ. ಬಿಡುವಿಲ್ಲದ ತಿರುಗಾಟ, ಅಧಿಕೃತ ಭೇಟಿಯ ಕಾರಣದಿಂದಾಗಿ ಕನಸು ಈಡೇರಿಲ್ಲವಾಗಿತ್ತು ಎಂದು ತಿಳಿಸಿದ್ದಾರೆ.
ಆದರೆ ಈ ಬಾರಿ ಭಾರತಕ್ಕೆ ಪತ್ನಿ ಜೊತೆ ಆಗಮಿಸಿ ಗೌಳಿ ಕುಟುಂಬವನ್ನು ಭೇಟಿಯಾಗಿ 200 ರೂಪಾಯಿ ಸಾಲವನ್ನು ವಾಪಸ್ ಕೊಟ್ಟು ತಮ್ಮ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಎಂದು ವರದಿ ವಿವರಿಸಿದೆ.