ಐಎಎಸ್ ಅಧಿಕಾರಿ ವಿಚಾರಣೆ ; ಇಂದೂ ಮುಂದುವರಿಯಲಿದೆ ತನಿಖೆ
Team Udayavani, Jul 28, 2020, 6:42 AM IST
ಕೇರಳ ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್.
ತಿರುವನಂತಪುರ/ಕೊಚ್ಚಿ: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಎನ್ಐಎ ಸೋಮವಾರ 9 ಗಂಟೆ ವಿಚಾರಣೆ ನಡೆಸಿದೆ.
ಕೊಚ್ಚಿಯಲ್ಲಿರುವ ಎನ್ಐಎ ಕಚೇರಿಯಲ್ಲಿ ಕೊಚ್ಚಿ, ದಿಲ್ಲಿ ಮತ್ತು ಹೈದರಾಬಾದ್ನ ಅಧಿಕಾರಿಗಳ ತಂಡ ವಿಚಾರಣೆ ನಡೆಸಿತು.
ಬೆಳಗ್ಗೆ 9.30ಕ್ಕೆ ಶುರುವಾದ ವಿಚಾರಣೆ ರಾತ್ರಿ 7 ಗಂಟೆಗೆ ಮುಕ್ತಾಯವಾಗಿದೆ. ಮಂಗಳವಾರ ಕೂಡ ಅವರ ವಿಚಾರಣೆ ಮುಂದುವರಿಯಲಿದೆ.
56 ಪ್ರಶ್ನೆಗಳ ಪಟ್ಟಿಯನ್ನು ಅಧಿಕಾರಿಗಳ ತಂಡ ಶಿವಶಂಕರ್ ಮುಂದಿಟ್ಟಿತು. ವಿಚಾರಣೆ ಮುಕ್ತಾಯವಾದ ಬಳಿಕ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೆ ಕಾರಿನಲ್ಲಿ ಹೊರಟರು.
ಈ ಹಿಂದೆ ತಿರುವನಂತಪುರದಲ್ಲೇ ಎನ್ಐಎ ಶಿವಶಂಕರ್ರನ್ನು ವಿಚಾರಣೆಗೆ ಒಳಪಡಿಸಿತ್ತು. ಆಗ ಅವರು, ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸರಿತ್ ತಮಗೆ ಪರಿಚಿತರಾಗಿದ್ದು, ಅವರೊಂದಿಗೆ ಸ್ನೇಹವಿತ್ತೇ ವಿನಾ ಚಿನ್ನದ ಕಳ್ಳ ಸಾಗಣೆಗೂ ತಮಗೂ ಸಂಬಂಧವಿಲ್ಲ ಎಂದಿದ್ದರು.
ಆದರೆ ಈ ವಿಚಾರದಲ್ಲಿ ಶಿವಶಂಕರ್ ನೀಡಿರುವ ಕೆಲವೊಂದು ಹೇಳಿಕೆಗಳು ವ್ಯತಿರಿಕ್ತವಾಗಿರುವ ಕಾರಣ, ಈ ಬಗ್ಗೆ ಸ್ಪಷ್ಟನೆ ಕೇಳಬೇಕಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಸೆಷನ್ಸ್ ಕೋರ್ಟ್ಗೆ ವರದಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಫೈಸಲ್ ಫರೀದ್ ಮತ್ತು ರಿಬಿನ್ಸನ್ ಎಂಬಿಬ್ಬರನ್ನು 17 ಮತ್ತು 18ನೇ ಆರೋಪಿಗಳು ಎಂದು ಕಸ್ಟಮ್ಸ್ ಇಲಾಖೆ ಹೆಸರಿಸಿದ್ದು, ಎರ್ನಾಕುಳಂ ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಇಬ್ಬರು ಆರೋಪಿಗಳು ದುಬಾೖಯಿಂದ ಕೇರಳಕ್ಕೆ ಸರಿಸುಮಾರು 1 ಕೋಟಿ ರೂ. ಮೌಲ್ಯದ ಬಂಗಾರವನ್ನು ಕಳ್ಳಸಾಗಣೆ ಮಾಡಿದ್ದಾರೆ. ಬರೋಬ್ಬರಿ 23 ಬಾರಿ ರಾಜತಾಂತ್ರಿಕ ಬ್ಯಾಗೇಜ್ ಮೂಲಕ ಸ್ಮಗ್ಲಿಂಗ್ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಇಲಾಖೆ ಬಹಿರಂಗಪಡಿಸಿದೆ.