ದೇಶದ ಕಿರಿಯ ಮೇಯರ್, ಕೇರಳದ ಕಿರಿಯ ಶಾಸಕ ಈಗ ಸತಿ-ಪತಿ
Team Udayavani, Sep 5, 2022, 7:28 PM IST
ತಿರುವನಂತಪುರ:ದೇಶದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಿರುವನಂತಪುರ ಮಹಾನಗರ ಪಾಲಿಕೆಯ ಮೇಯರ್ ಆರ್ಯ ರಾಜೇಂದ್ರನ್ (22) ಮತ್ತು ಕೇರಳದ ಅತ್ಯಂತ ಕಿರಿಯ ಶಾಸಕ ಸಚಿನ್ ದೇವ್ (28) ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ.
ತಿರುವನಂತಪುರದ ಎಕೆಜಿ ಸೆಂಟರ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮಕ್ಕೆ ಕೇರಳ ಮಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ಘಟಕದ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಸೇರಿದಂತೆ ಪ್ರಮುಖರು ಸಾಕ್ಷಿಯಾದರು. ಸಚಿನ್ ಅವರು ಬಲುಸ್ಸರಿ ಕ್ಷೇತ್ರದ ಶಾಸಕ. ಇಬ್ಬರೂ ಕೂಡ ಸಿಪಿಎಂನ ಬಾಲಸಂಘಂನ ಸದಸ್ಯರಾಗಿದ್ದರು ಮತ್ತು ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನಲ್ಲೂ ಸಕ್ರಿಯರಾಗಿದ್ದರು.
ಮದುವೆಗೆ ಬಂದ ಅತಿಥಿಗಳಿಗೆ ಭೋಜನವಿರಲಿಲ್ಲ. ಬದಲಾಗಿ ಟೀ ಮತ್ತು ತಿನಿಸುಗಳನ್ನು ಮಾತ್ರ ನೀಡಲಾಯಿತು. ಫೇಸ್ಬುಕ್ನಲ್ಲಿ ಮದುವೆಗೆ ಆಮಂತ್ರಿಸಿದ್ದ ಮೇಯರ್ ಆರ್ಯ ರಾಜೇಂದ್ರನ್, ವಿವಾಹಕ್ಕೆ ಯಾವುದೇ ಉಡುಗೊರೆಗಳನ್ನು ತರದಂತೆ ಹಾಗೂ ಒಂದು ವೇಳೆ ಕೊಡಬೇಕೆನಿಸಿದರೆ ವೃದ್ಧಾಶ್ರಮಗಳಿಗೆ ಅಥವಾ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು.