ರಾಮಮಂದಿರ ಉದ್ಘಾಟನೆಯ ದಿನಾಂಕ ಘೋಷಣೆ: ಶಾ ವಿರುದ್ಧ ಖರ್ಗೆ ವಾಗ್ದಾಳಿ
ನಿಮ್ಮ ಕೆಲಸ ದೇಶವನ್ನು ಸುರಕ್ಷಿತವಾಗಿರಿಸುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸುವುದು
Team Udayavani, Jan 6, 2023, 7:56 PM IST
ಪಾಣಿಪತ್: ಅಯೋಧ್ಯೆಯಲ್ಲಿ 2024ರ ಜನವರಿ 1 ರೊಳಗೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ತ್ರಿಪುರಾದಲ್ಲಿ ಘೋಷಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿ ಅವರೇನು ದೇಗುಲದ ಮಹಾಂತರೇ ಎಂದು ಪ್ರಶ್ನಿಸಿದ್ದಾರೆ.
“ಎಲ್ಲರಿಗೂ ದೇವರಲ್ಲಿ ನಂಬಿಕೆ ಇರುತ್ತದೆ. ಆದರೆ ತ್ರಿಪುರಾ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ನೀವು ಅಂತಹ ಘೋಷಣೆಯನ್ನು ಏಕೆ ಮಾಡಿದ್ದೀರಿ? ಮತ್ತು 2024 ಲೋಕಸಭೆ ಚುನಾವಣೆಯು ಮೇ ತಿಂಗಳಿನಲ್ಲಿ ನಡೆಯುವಾಗ, ನೀವು ರಾಮ ಮಂದಿರವನ್ನು ಉದ್ಘಾಟಿಸುವುದಾಗಿ ಹೇಳುತ್ತಿದ್ದೀರಿ.ಇಂತಹ ಘೋಷಣೆ ಮಾಡಲು ನೀವು ಯಾರು? ನೀವು ರಾಮಮಂದಿರದ ಪೂಜಾರಿಯೇ ಅಥವಾ ಮಹಾಂತರೇ?” ಎಂದು ಖರ್ಗೆ ಕಿಡಿ ಕಾರಿದ್ದಾರೆ.
“ಮಹಾಂತರು ಮತ್ತು ದಾರ್ಶನಿಕರು ಹೇಳಲಿ. ನೀವೊಬ್ಬ ರಾಜಕಾರಣಿ. ನಿಮ್ಮ ಕೆಲಸ ದೇಶವನ್ನು ಸುರಕ್ಷಿತವಾಗಿರಿಸುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸುವುದು, ಜನರಿಗೆ ಆಹಾರ ಸಿಗುತ್ತದೆ ಮತ್ತು ರೈತರ ಉತ್ಪನ್ನಗಳಿಗೆ ಬೆಲೆ ನೀಡುವುದು. ಅದು ನಿಮ್ಮ ಕೆಲಸ ”ಎಂದು “ಭಾರತ್ ಜೋಡೋ ಯಾತ್ರೆ” ಯ ಭಾಗವಾಗಿ ಇಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.