ಗೋ ಭಕ್ತಿ ಹೆಸರಲ್ಲಿ ಜನರ ಹತ್ಯೆ ಸಲ್ಲದು: ಮೋದಿ
Team Udayavani, Jun 30, 2017, 3:00 AM IST
ಅಹಮದಾಬಾದ್: ದೇಶದ ವಿವಿಧೆಡೆ ಗೋರಕ್ಷಣೆ ಹೆಸರಿನಲ್ಲಿ ದಾಳಿಗಳು ನಡೆಯುತ್ತಿರುವಂತೆಯೇ, ಗೋ ಭಕ್ತಿ ಹೆಸರಲ್ಲಿ ಜನರ ಹತ್ಯೆಯನ್ನು ಒಪ್ಪಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಗುರುವಾರ ಗುಜರಾತಿನ ಸಾಬರ್ಮತಿ ಆಶ್ರಮದಲ್ಲಿ ಮಹಾತ್ಮಾ ಗಾಂಧೀಜಿಯವರ ಗುರು ರಾಜ್ ಚಂದ್ರ್ಜೀ ಅವರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ‘ಇಂದು ನಾನು ಬೇಸರ ಮತ್ತು ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಇರುವೆ, ಬೀದಿನಾಯಿ, ಮೀನುಗಳಿಗೆ ಆಹಾರವನ್ನು ನೀಡುವ ಸಂಸ್ಕೃತಿ ಹೊಂದಿದ, ಮಹಾತ್ಮಾ ಅವರ ಅಹಿಂಸಾವಾದದ ಪಾಠ ಕಲಿತ ನಮ್ಮ ದೇಶಕ್ಕೆ ಈಗ ಏನಾಗಿದೆ ?’ ಎಂದು ಪ್ರಶ್ನಿಸಿದರು.
‘ಹಿಂಸಾಚಾರ, ರಾಷ್ಟ್ರಪಿತ ಗಾಂಧಿಯವರ ಆದರ್ಶಗಳಿಗೆ ವಿರುದ್ಧವಾದದ್ದು. ಗೋ ಭಕ್ತಿ ಹೆಸರಲ್ಲಿ ಜನರನ್ನು ಹತ್ಯೆಗೈಯುವುದನ್ನು ಒಪ್ಪಲಾಗದು. ಇದನ್ನು ಮಹಾತ್ಮಾ ಅವರೂ ಒಪ್ಪಲು ಸಾಧ್ಯವಿಲ್ಲ’ ಎಂದರು. ‘ಮಹಾತ್ಮಾ ಗಾಂಧೀಜಿಯವರ ಕನಸಿನ ಭಾರತವನ್ನು ಕಟ್ಟಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೆಮ್ಮೆಪಡುವಂತೆ ಮಾಡಬೇಕಿದೆ’ ಎಂದರು.
‘ಈ ದೇಶದಲ್ಲಿ ಯಾರೊಬ್ಬರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಹಿಂಸಾಚಾರದಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಒಂದು ಸಮಾಜದಲ್ಲಿ ಹಿಂಸಾಚಾರಕ್ಕೆ ಅವಕಾಶವೇ ಇಲ್ಲ’ ಎಂದೂ ಒತ್ತಿ ಹೇಳಿದರು. ರೋಗಿ ಮೃತಪಟ್ಟರೆ ವೈದ್ಯರ ಮೇಲೆ ಹಿಂಸೆ, ಅಪಘಾತವಾದರೆ ವಾಹನಗಳನ್ನು ಪುಡಿ ಮಾಡುವ, ಬೆಂಕಿ ಹಚ್ಚುವ ಪ್ರಕರಣಗಳು ವರದಿಯಾಗುತ್ತಿರುವುದನ್ನೂ ಅವರು ಪ್ರಸ್ತಾವಿಸಿದರು. ಇತ್ತೀಚೆಗೆ ಗೋರಕ್ಷಣೆ ಹೆಸರಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ಉದ್ರಿಕ್ತ ಗುಂಪುಗಳಿಂದ ಹತ್ಯೆ ಇತ್ಯಾದಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೋದಿ ಮಾತುಗಳು ಗಮನಾರ್ಹವಾಗಿವೆ.
ವಿಪಕ್ಷಗಳಿಂದ ಟೀಕೆ: ಇದೇ ವೇಳೆ, ಕಾಂಗ್ರೆಸ್ನ ರೇಣುಕಾ ಚೌಧರಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ಕೊನೆಗೂ ಬಾಯಿ ತೆರೆದಿದ್ದಾರೆ. ಅವರ ಹೇಳಿಕೆಗೆ ಸ್ವಾಗತ ಎಂದಿದ್ದಾರೆ.
ಅಲ್ಪ ಸಂಖ್ಯಾಕರಲ್ಲಿ ಭಯ, ಅಭದ್ರತೆ ವಾತಾವರಣವಿಲ್ಲ
ಮುಸ್ಲಿಮರನ್ನು ಗುರಿಯಾಗಿಸಿ ಹಲ್ಲೆ, ಹಿಂಸಾಚಾರ ನಡೆಸಲಾಗುತ್ತಿದೆ ಎನ್ನುವ ವರದಿಗಳ ಮಧ್ಯೆಯೇ ‘ಮುಸ್ಲಿಮರಿಗೆ ಸಮಾಜದಲ್ಲಿ ಭಯ ಅಥವಾ ಅಭದ್ರತೆಯ ವಾತಾವರಣವಿಲ್ಲ’ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಟಾಸ್ ನಖ್ವೀ ಹೇಳಿದ್ದಾರೆ. ಕೆಲವು ಕಾಣದ ಕೈಗಳು ಇಂಥ ಘಟನೆಯ ಹಿಂದಿದ್ದು, ಅವುಗಳ ಯತ್ನವನ್ನು ಸಫಲಗೊಳಿಸಲು ಬಿಡಬಾರದು ಎಂದು ಅವರು ಹೇಳಿದ್ದಾರೆ.
ಮೋದಿ ಹೇಳಿಕೆಗೆ ಸ್ವಾಗತ
ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡುವವರ ವಿರುದ್ಧದ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ. ‘ಇಂತಹ ಕೃತ್ಯಗಳನ್ನು ಎಸಗುವವರು ನಿಮ್ಮ ಮಾತುಗಳನ್ನು ಕೇಳಿಸಿಕೊಂಡು ಅದರಂತೆ ನಡೆದುಕೊಳ್ಳುತ್ತಾರೆ ಎಂದುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.