ವಿಜಯವಾಡ: ಆಂಧ್ರ ಸಿಎಂ ಜಗನ್ ಭೇಟಿಗೂ ಮುನ್ನ ಕನಕದುರ್ಗಾ ದೇವಾಲಯದ ಬಳಿ ಭೂ ಕುಸಿತ
ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
Team Udayavani, Oct 21, 2020, 6:46 PM IST
ಹೈದರಾಬಾದ್: ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಪ್ರಸಿದ್ಧ ಕನಕ ದುರ್ಗಾ ದೇವಾಲಯದ ಬಳಿ ಭೂಕುಸಿತ ಸಂಭವಿಸಿದ ಪರಿಣಾಮ ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಘಟನೆ ಬುಧವಾರ (ಅಕ್ಟೋಬರ್ 21, 2020) ನಡೆದಿರುವುದಾಗಿ ವರದಿ ತಿಳಿಸಿದೆ.
ವರದಿಗಳ ಪ್ರಕಾರ, ವಿಜಯವಾಡದ ಕೀಲಾದ್ರಿ ಪರ್ವತ ಪ್ರದೇಶದ ಮೇಲಿನ ಹಲವಾರು ಕಲ್ಲುಬಂಡೆ ಕೆಳಗೆ ಉರುಳಿ ಬಂದ ಪರಿಣಾಮ ಕನಕ ದುರ್ಗ ದೇವಾಲಯದ ಆವರಣ ಕುಸಿದು ಬಿದ್ದಿದ್ದು, ಇದರಿಂದಾಗಿ ಭಕ್ತರು ಗಾಬರಿಗೊಂಡು ಅಡ್ಡಾದಿಡ್ಡಿ ಓಡಿದ್ದರು. ಕೆಲವು ಭಕ್ತರಿಗೆ ಗಾಯಗಳಾಗಿರುವುದಾಗಿ ವರದಿ ಹೇಳಿದೆ.
ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ವರದಿ ತಿಳಿಸಿದೆ. ಜಿಲ್ಲಾಧಿಕಾರಿ ಎಂಎಂಡಿ ಇಮ್ತಿಯಾಜ್ ಮತ್ತು ಪೊಲೀಸ್ ಕಮಿಷನರ್ ಬಿ.ಶ್ರೀನಿವಾಸುಲು ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಸಚಿವ ಕೆ.ಶ್ರೀವೆಂಕಟೇಶ್ವರ ರಾವ್ ಕೂಡಾ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯವನ್ನು ಪರಿಶೀಲಿಸುತ್ತಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿನ ಗುಡ್ಡಪ್ರದೇಶದ ಮೇಲಿರುವ ಕನಕದುರ್ಗಾ ದೇವಾಲಯಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಭೇಟಿ ನೀಡುವ ಮುನ್ನ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.