ಪ್ರಣಾಳಿಕೆಗೆ ಸಲಹೆ ಆಹ್ವಾನ
Team Udayavani, Feb 4, 2019, 12:30 AM IST
ಹೊಸದಿಲ್ಲಿ: ಈಗಾಗಲೇ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಜೆಪಿ, ತನ್ನ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ದೇಶದ ಜನರ ಸಲಹೆ ಕೋರಿದೆ. “ಭಾರತ್ ಕೆ ಮನ್ ಕಿ ಬಾತ್, ಮೋದಿ ಕೆ ಸಾಥ್’ ಎಂಬ ಹೆಸರಿನ ಒಂದು ತಿಂಗಳ ಕಾರ್ಯಕ್ರಮಕ್ಕೆ ಭಾನುವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಿರಿಯ ನಾಯಕ ರಾಜನಾಥ್ಸಿಂಗ್ ಚಾಲನೆ ನೀಡಿದ್ದಾರೆ.
ಪ್ರಣಾಳಿಕೆ ತಯಾರಿಕಾ ಪ್ರಕ್ರಿಯೆಯಲ್ಲೂ ಪ್ರಜಾಪ್ರಭುತ್ವವನ್ನು ತರುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಿದ್ದು, ಇದು ದೇಶದ ಪ್ರಜಾಸತ್ತೆಯನ್ನು ಬಲಿಷ್ಠಗೊಳಿಸುವ ವಿಶಿಷ್ಟ ಪ್ರಯೋಗ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ. ಕಾರ್ಯಕ್ರಮ ನಡೆದ ಸ್ಥಳದಲ್ಲೇ ಇದ್ದ ಹೋಟೆಲ್ ವೇಯrರ್ವೊಬ್ಬರಿಂದ ಮೊದಲ ಸಲಹೆಯನ್ನು ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸಲಹೆ ನೀಡುವುದು ಹೇಗೆ?: ಇದಕ್ಕೆಂದೇ 300 ವಾಹನಗಳನ್ನು ಬಳಸಲು ಬಿಜೆಪಿ ನಿರ್ಧರಿಸಿದೆ. ಅದರಂತೆ, 300ರಷ್ಟು ವಾಹನಗಳು ದೇಶಾದ್ಯಂತ ಸಂಚರಿಸಲಿವೆ. ಈ ವಾಹನಗಳಲ್ಲಿ ಸುಮಾರು 7,700 ಪೆಟ್ಟಿಗೆಗಳನ್ನು ಇಡಲಾಗಿದೆ. ವಾಹನಗಳು ದೇಶದ 4 ಸಾವಿರ ಅಸೆಂಬ್ಲಿಗಳಿಗೆ ತೆರಳಿ, ಅಲ್ಲಿನ ಜನರಿಂದ ಪ್ರಣಾಳಿಕೆಗೆ ಸಲಹೆಗಳನ್ನು ಪಡೆಯಲಿದೆ. ಜನ ತಮ್ಮ ಮನದಲ್ಲಿರುವಂಥ ಸಲಹೆಗಳನ್ನು ಪತ್ರದಲ್ಲಿ ಬರೆದು ಪೆಟ್ಟಿಗೆಯೊಳಕ್ಕೆ ಹಾಕಬೇಕು. ಇದಲ್ಲದೆ ಸಾಮಾಜಿಕ ಮಾಧ್ಯಮ ಮತ್ತು ದೂರವಾಣಿ ಸಂವಹನದ ಮೂಲಕವೂ ಸಲಹೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 10 ಕೋಟಿ ಮಂದಿಯಿಂದ ಸಲಹೆಗಳನ್ನು ಸ್ವೀಕರಿಸಲು ಬಿಜೆಪಿ ಉದ್ದೇಶಿಸಿದೆ.