ಹೆದ್ದಾರಿ ದಾಳಿಗೆ ಸಂಚು ಮಾಡಿದ್ದ ಲಷ್ಕರ್ ಕಮಾಂಡರ್, ಪಾಕ್ ಉಗ್ರನನ್ನು ಕೊಂದ ಭದ್ರತಾ ಪಡೆ
Team Udayavani, Jun 29, 2021, 7:54 AM IST
ಶ್ರೀನಗರ: ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಉನ್ನತ ದರ್ಜೆಯ ಕಮಾಂಡರ್ ಮತ್ತು ಪಾಕಿಸ್ಥಾನಿ ಉಗ್ರನೋರ್ವನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ.
ಶ್ರೀನಗರದ ಪಾರಿಂಪೊರಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಲವು ಮಂದಿ ನಾಗರಿಕರು ಮತ್ತು ಸೈನಿಕರ ಸಾವಿಗೆ ಕಾರಣನಾಗಿದ್ದ ಲಷ್ಕರ್ ಕಮಾಂಡರ್ ನದೀಂ ಅಬ್ರಾರ್ ಮತ್ತು ಪಾಕಿಸ್ಥಾನಿ ಉಗ್ರನನ್ನು ಹತ್ಯೆ ಮಾಡಲಾಗಿದೆ.ಈ ಪಾಕಿಸ್ಥಾನಿ ಉಗ್ರ ನದೀಂ ಅಬ್ರಾರ್ ಗೆ ಸಹಾಯಕನಾಗಿದ್ದ.
ಎರಡು ಎಕೆ -47 ರೈಫಲ್ಗಳು ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಹಲವಾರು ಆಯುಧಳನ್ನು ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಭಯೋತ್ಪಾದಕರು ಹೆದ್ದಾರಿಯ ಮೇಲೆ ದಾಳಿ ನಡೆಸುವ ಬಗ್ಗೆ ಖಚಿತ ಮಾಹಿತಿ ಇಲಾಖೆಗೆ ಸಿಕ್ಕಿತ್ತು.ಈ ಮಾಹಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯಿಂದ ಜಂಟಿಯಾಗಿ ಹೆದ್ದಾರಿಯಲ್ಲಿ ನಾಕಾ ಬಂದಿ ಹಾಕಲಾಯಿತು.
ಇದನ್ನೂ ಓದಿ:ರೋಜ್ ಗಾರ್ ಯೋಜನೆ 9 ತಿಂಗಳು ವಿಸ್ತರಣೆ : ನಿರ್ಮಲಾ ಸೀತಾರಾಮನ್
ಪರಿಂಪೋರಾದಲ್ಲಿ ವಾಹನವೊಂದನ್ನು ನಿಲ್ಲಿಸಿ ಅದರಲ್ಲಿದ್ದವರ ಗುರುತನ್ನು ಕೇಳಿದಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ತನ್ನ ಬ್ಯಾಗ್ ತೆರೆಯಲು ಯತ್ನಿಸಿ ಗ್ರೆನೇಡ್ ತೆಗೆದ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತತಾ ಪಡೆಗಳು ಹಿಂದಿನ ಸೀಟಿನಲ್ಲಿ ಕುಳಿತ ವ್ಯಕ್ತಿಯನ್ನು ವಶಕ್ಕೆ ಪಡೆದರು. ಚಾಲಕ ಮತ್ತು ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೇ ಎಲ್ಇಟಿ ಕಮಾಂಡರ್ ನದೀಂ ಅಬ್ರಾರ್.
ಅಬ್ರಾರ್ನನ್ನು ಪೊಲೀಸರು, ಸಿಆರ್ಪಿಎಫ್ ಮತ್ತು ಸೇನೆಯು ಜಂಟಿಯಾಗಿ ವಿಚಾರಣೆ ನಡೆಸಿತು. ಆತನ ಬಳಿಯಿಂದ ಪಿಸ್ತೂಲ್ ಮತ್ತು ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸತತ ವಿಚಾರಣೆಯ ಬಳಿಕ ಅಬ್ರಾರ್, ತನ್ನ ಎಕೆ -47 ರೈಫಲ್ ಗಳನ್ನು ಮಾಲೂರಾದಲ್ಲಿರುವ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾನೆ. ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲು ನದೀಂ ನನ್ನು ಆತನ ಮನೆಗೆ ಪೊಲೀಸರು ಕರೆದೊಯ್ದಿದ್ದಾರೆ.
ಸೇನಾ ಪಡೆಯು ಆತನ ಮನೆಗೆ ಬರುತ್ತಿದ್ದಂತೆ ಅಲ್ಲಿದ್ದ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಿದರು. ಆರಂಭಿಕ ಗುಂಡಿನ ಕಾಳಗದಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡರು. ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಿ, ಹೆಚ್ಚಿನ ಫೋರ್ಸ್ ಗಾಗಿ ಕರೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿಆರ್ಪಿಎಫ್ ಮತ್ತು ಸೈನ್ಯದ ಘಟಕಗಳು ಮನೆಯನ್ನು ಸುತ್ತುವರಿದವವು. ನಂತರದ ಗುಂಡಿನ ಚಕಮಕಿಯಲ್ಲಿ, ಮನೆಯೊಳಗಿನಿಂದ ಗುಂಡು ಹಾರಿಸಿದ ಪಾಕಿಸ್ತಾನಿ ಭಯೋತ್ಪಾದಕ ಮತ್ತು ಅಬ್ರಾರ್ ನನ್ನೂ ಕೊಲ್ಲಲಾಯಿತು.
ಎನ್ಕೌಂಟರ್ ಸಮಯದಲ್ಲಿ ಗಾಯಗೊಂಡ ಮೂವರು ಸಿಆರ್ಪಿಎಫ್ ಸಿಬ್ಬಂದಿಯಲ್ಲಿ ಸಹಾಯಕ ಕಮಾಂಡೆಂಟ್, ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ ಸೇರಿದ್ದಾರೆ. ಗಂಭೀರ ಗಾಯಗೊಂಡಿದ್ದರಿಂದ ಸಹಾಯಕ ಕಮಾಂಡೆಂಟ್ ಅವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.