ಕೇಂದ್ರ ಸೇವೆಗೆ ಐಎಎಸ್ ಅಧಿಕಾರಿಗಳ ಕಳುಹಿಸುವಂತೆ ಪತ್ರ
Team Udayavani, Dec 20, 2017, 8:43 AM IST
ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಮ ಶ್ರೇಣಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಐಎಎಸ್ ಅಧಿಕಾರಿಗಳ ಕೊರತೆ ಉಂಟಾಗಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಪತ್ರ ಬರೆದಿದೆ. ಅದರ ಪ್ರಕಾರ ರಾಜ್ಯಗಳು ತಮ್ಮಲ್ಲಿರುವ ಐಎಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ನಿಯೋಜನೆಗೆ ಬಿಡಬೇಕು ಎಂದು
ಕೋರಿದೆ. ಕೇಂದ್ರ ಸೇವೆಯ ನಿಯೋಜನೆಗೆ ಸಂಬಂಧಿಸಿದಂತೆ 1,051 ಹುದ್ದೆಗಳ ಪೈಕಿ 493ನ್ನು ಐಎಎಸ್ ಅಧಿಕಾರಿಗಳಿಗೆ ಮೀಸಲು ಇರಿಸಲಾಗಿದೆ. ಅದನ್ನು ಭರ್ತಿ ಮಾಡಿದ ಬಳಿಕ 558 ಹುದ್ದೆಗಳು ಮತ್ತೂ ಉಳಿದುಕೊಳ್ಳುತ್ತವೆ. ಕರ್ನಾಟಕ 44 ಅಧಿಕಾರಿಗಳ
ಸ್ಥಾನದಲ್ಲಿ 19, ಮಹಾರಾಷ್ಟ್ರ 66 ರ ಪೈಕಿ 20 ಅಧಿಕಾರಿಗಳನ್ನು ನಿಯೋಜಿಸಿದೆ.
ಐಎಎಸ್ ಅಧಿಕಾರಿಗಳ ವರ್ಗ: ರಾಜ್ಯ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಡಾ.ಕೆ.ಜಿ.ಜಗದೀಶ್ ಅವರನ್ನು ಕಾರ್ಮಿಕ ಇಲಾಖೆ ಆಯುಕ್ತರಾಗಿ, ಕೆಪಿಎಸ್ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಪ್ರಸನ್ನ ಕುಮಾರ್ ಅವರು ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ.