ಪಣಜಿ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತ್ಯು
Team Udayavani, Apr 3, 2023, 5:02 PM IST
ಪಣಜಿ: ಗೋವಾ ವಾಸ್ಕೊ ಮುರಗಾಂವ್ ತಾಲೂಕಿನ ವರುಣಪುರಿ ಜಂಕ್ಷನ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಉದ್ಯೋಗಿಯನ್ನು ಅರವಿಂದ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಪಾಸ್ವಾನ್ ಅವರು ತನ್ನ ಸ್ಕೂಟಿಯಲ್ಲಿ (ಜಿಎ ಒ6 ಆರ್ 8173) ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ (ಕೆಎ 63 2716) ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಅಪಘಾತದ ಸಂಭವಿಸಿದ ವೇಳೆ ಕೆಲಕಾಲ ಈ ಪರಿಸರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿತ್ತು, ಈ ಟ್ರಕ್ ಹೆಡ್ಲ್ಯಾಂಡ್ ಸಡಾದಿಂದ ಬರುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವಾಸ್ಕೋ ಶಾಸಕ ಕೃಷ್ಣ ಸಾಲ್ಕರ್ ಭೇಟಿ ನೀಡಿದ್ದಾರೆ.
ಸ್ಪೀಡ್ ಬ್ರೇಕರ್ ಅಳವಡಿಸಲು ಸ್ಥಳೀಯರ ಒತ್ತಾಯ:
ಈ ಮಾರ್ಗದಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ವೇಗ ತಡೆಗಳನ್ನು ಅಳವಡಿಸದ ಹೊರತು ಇಲ್ಲಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ವಾಹನ ಮಾಲೀಕರು ಅಜಾಗರೂಕತೆಯಿಂದ ವಾಹನ ಚಲಾಯಿಸುವುದರಿಂದ ಈ ಭಾಗದಲ್ಲಿ ಅಪಘಾತ ಹೆಚ್ಚುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಇದು ಜನವಸತಿ ಪ್ರದೇಶವಾಗಿದ್ದು, ಇಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿ ಪುಟ್ಟ ಮಕ್ಕಳು ಆಟವಾಡುತ್ತಿರುತ್ತಾರೆ. ಹೀಗಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇದೆ ಎನ್ನುತ್ತಾರೆ ಸ್ಥಳೀಯರು. ಮುರಗಾಂವ್ ಬಂದರಿನ ಸಂಚಾರದಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿದೆ ಎಂದು ಜನತೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಸಿಬಿಐನ ಪ್ರಮುಖ ಜವಾಬ್ದಾರಿ: ಪಿಎಂ ಮೋದಿ