‘ಪ್ರೇಮ ನಿಘಾತ’ ಶೇ.28ರಷ್ಟು ಹೆಚ್ಚಳ
ಪ್ರೇಮಿಗಳಿಗೆ ಶಾಕಿಂಗ್ ಸುದ್ದಿ ನೀಡಿದ ಎನ್ಸಿಆರ್ಬಿ ದಾಖಲೆ!
Team Udayavani, Nov 20, 2019, 7:28 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ‘ಪ್ರೀತಿ ಮಾಯೆ ಹುಷಾರು… ಕಣ್ಣೀರ್ ಮಾರೋ ಬಜಾರು… ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತಿಗೆ’ ಎಂಬ ದುನಿಯಾ ಚಿತ್ರದ ಹಾಡು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯು (ಎನ್ಸಿಆರ್ಬಿ) ಹೊರ ಹಾಕಿರುವ ಕುತೂಹಲಕಾರಿ ದತ್ತಾಂಶವೊಂದಕ್ಕೆ ಹೇಳಿ ಮಾಡಿಸಿದಂತಿದೆ! 2001ರಿಂದ 2007ರ ಅವಧಿಯಲ್ಲಿ ಭಾರತದಲ್ಲಿ ಪ್ರೇಮ ವಿಚಾರಕ್ಕಾಗಿ (ಅಕ್ರಮ ಸಂಬಂಧ ಪ್ರಕರಣಗಳೂ ಸೇರಿ) ಕೊಲೆಗೀಡಾದವರ ಪ್ರಮಾಣ ಶೇ.28ರಷ್ಟು ಹೆಚ್ಚಾಗಿರುವ ವಿಚಾರ ಎನ್ಸಿಆರ್ಬಿ ದಾಖಲೆಗಳ ಮೂಲಕ ಬೆಳಕಿಗೆ ಬಂದಿದೆ.
2001ರಲ್ಲಿ ಎನ್ಸಿಆರ್ಬಿ ಒಟ್ಟು 36,202 ಕೊಲೆ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. 2017ರಲ್ಲಿ ಒಟ್ಟು ಕೊಲೆಗಳ ಪ್ರಮಾಣ ಶೇ. 21ರಷ್ಟು ಇಳಿಕೆಯಾಗಿ 28,653ಕ್ಕೆ ಬಂದು ನಿಂತಿತ್ತು. ಇದರಲ್ಲಿ ವೈಯಕ್ತಿಕ ಸೇಡಿಗಾಗಿ ನಡೆದ ಹತ್ಯೆಗಳು ಶೇ.4.3ರಷ್ಟು ಇಳಿಕೆಯಾಗಿದ್ದರೆ, ಆಸ್ತಿ ವಿಚಾರವಾಗಿ ನಡೆದ ಹತ್ಯೆಗಳ ಪ್ರಮಾಣ ಶೇ.12ರಷ್ಟು ಹೆಚ್ಚಾಗಿದ್ದವು. ಆದರೆ, ಪ್ರೇಮ ಪ್ರಕರಣಗಳಲ್ಲಿ ಹತ್ಯೆಗೀಡಾದವರ ಪ್ರಮಾಣ 2001ಕ್ಕೆ ಹೋಲಿಸಿದರೆ, ಶೇ.28 ಹೆಚ್ಚಾಗಿವೆ. ಇಂಥ ಪ್ರಕರಣಗಳು ಹೆಚ್ಚಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಗುಜರಾತ್ಗಳಲ್ಲಿ ಆಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಲವ್ ರಕ್ತಪಾತಕ್ಕೆ 2ನೇ ಸ್ಥಾನ
2001ರಿಂದ 2017ರವರೆಗಿನ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರೇಮ ಪ್ರಕರಣಗಳಲ್ಲಿ ಹತ್ಯೆಗೀಡಾದವರ ಸಂಖ್ಯೆ 2ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ವೈಯಕ್ತಿಕ ದ್ವೇಷಕ್ಕೆ 156 ಜನರು ಬಲಿಯಾಗಿದ್ದರೆ, ಪ್ರೇಮ ಪ್ರಕರಣಗಳಲ್ಲಿ 113, ಆಸ್ತಿ ವ್ಯಾಜ್ಯಗಳಲ್ಲಿ 87, ವೈಯಕ್ತಿಕ ಲಾಭದ ಉದ್ದೇಶಕ್ಕಾಗಿ 61 ಹಾಗೂ ವರದಕ್ಷಿಣೆ ವಿಚಾರವಾಗಿ 49 ಜನರು ಹತ್ಯೆಗೀಡಾಗಿದ್ದಾರೆ.