ಬಡವರಿಗಾಗಿ ಆಸ್ಪತ್ರೆ ಕಟ್ಟಲು ಕರುಣಾನಿಧಿ ಗೋಪಾಲಪುರಂ ಮನೆ ದಾನ
Team Udayavani, Aug 8, 2018, 1:49 PM IST
ಚೆನ್ನೈ: ಡಿಎಂಕೆ ಪರಮೋಚ್ಛ ನಾಯಕ ಎಂ.ಕರುಣಾನಿಧಿ ಅವರು 2010ರಲ್ಲಿ ಗೋಪಾಲಪುರಂನಲ್ಲಿರುವ ಐಶಾರಾಮಿ ನಿವಾಸವನ್ನು ಬಡವರಿಗಾಗಿ ಆಸ್ಪತ್ರೆ ಕಟ್ಟಲು ದಾನವಾಗಿ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಕರುಣಾನಿಧಿ ಅವರು ಮಂಗಳವಾರ ಸಂಜೆ ಕಾವೇರಿ ಆಸ್ಪತ್ರೆಯಲ್ಲಿ ಕರುಣಾನಿಧಿ ಅಸ್ತಂಗತರಾಗಿದ್ದಾರೆ.
ಕರುಣಾನಿಧಿ ಅವರು ತಮ್ಮ 86ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಣ್ಣೈ ಅಂಜುಗಂ ಟ್ರಸ್ಟ್ ಗೆ ಮನೆಯನ್ನು ದಾನವನ್ನಾಗಿ ನೀಡಿರುವ ಗಿಫ್ಟ್ ಡೀಡ್ ಗೆ ಸಹಿ ಹಾಕಿ ಕೊಟ್ಟಿದ್ದರು. ತನ್ನ ಹಾಗೂ ತನ್ನ ಪತ್ನಿಯರ ನಿಧನಾನಂತರ ಗೋಪಾಲಪುರಂ ಮನೆಯನ್ನು ಆಸ್ಪತ್ರೆಯನ್ನಾಗಿ ಮಾಡಬೇಕೆಂದು ಕರುಣಾನಿಧಿ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.
1968ರಲ್ಲಿ ತನ್ನ ಮಕ್ಕಳಾದ ಅಳಗಿರಿ, ಸ್ಟಾಲಿನ್ ಹಾಗೂ ತಮಿಳರಸು ಹೆಸರಲ್ಲಿ ಮನೆಯನ್ನು ರಿಜಿಸ್ಟರ್ಡ್ ಮಾಡಿದ್ದರು. 2009ರಲ್ಲಿ ಮೂವರು ಒಮ್ಮತದಿಂದ ಸಮ್ಮತಿ ನೀಡಿದ ನಂತರ ಡಿಎಂಕೆ ವರಿಷ್ಠ ಗೋಪಾಲಪುರಂ ಮನೆಯನ್ನು ಟ್ರಸ್ಟ್ ಗೆ ದಾನವಾಗಿ ನೀಡಿದ್ದರು. ಕೇಂದ್ರ ಮಾಜಿ ಸಚಿವ ಎ.ರಾಜಾ ಮತ್ತು ಖ್ಯಾತ ಗೀತರಚನೆಕಾರ ವೈರಮುತು ಸೇರಿದಂತೆ ಹಲವು ಗಣ್ಯರು ಟ್ರಸ್ಟ್ ನ ಸದಸ್ಯರಾಗಿದ್ದಾರೆ.