ಮಧ್ಯಪ್ರದೇಶದಲ್ಲಿ ಕಮಲನಾಥ್ ಸರಕಾರಕ್ಕೆ ಸಂಕಟ : 17 ಶಾಸಕರು ಬೆಂಗಳೂರಿಗೆ ಶಿಫ್ಟ್
Team Udayavani, Mar 9, 2020, 7:17 PM IST
ಭೋಪಾಲ್: ಅಲ್ಪಮತದ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಮಧ್ಯಪ್ರದೇಶದಲ್ಲಿ ಇನ್ನಷ್ಟು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ.
ಮಾಜೀ ಸಂಸದ ಮತ್ತು ರಾಜ್ಯದ ಯುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ಬೆಂಬಲಿಗರೆನ್ನಲಾಗುತ್ತಿರುವ 17 ಮಂದಿ ಕಾಂಗ್ರೆಸ್ ಶಾಸಕರು ಚಾರ್ಟಡ್ ವಿಮಾನ ಏರಿ ಬೆಂಗಳೂರಿಗೆ ಹಾರಿದ್ದಾರೆ. ಇವರಲ್ಲಿ ಆರು ಜನ ಮಂತ್ರಿಗಳಿದ್ದಾರೆ.
ಪಕ್ಷ ನಿಷ್ಠೆ ಬದಲಿಸಲು ಸಿದ್ಧರಾಗಿರುವ ಈ ಶಾಸಕರು ಇದೀಗ ಬಿಜೆಪಿ ಸರಕಾರ ಆಡಳಿತದಲ್ಲಿರುವ ಬೆಂಗಳೂರಿನಲ್ಲಿ ಆಶ್ರಯ ಪಡೆಯುವ ಮೂಲಕ 15 ತಿಂಗಳ ಕಮಲನಾಥ್ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.
ಕಮಲನಾಥ್ ಸರಕಾರದಲ್ಲಿ ಬಂಡಾಯದ ಬಿರುಗಾಳಿ ಏಳಲು ಕಾಂಗ್ರೆಸ್ ಯುವ ನಾಯಕ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಯಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಚಿತಾವಣೆಯೇ ಕಾರಣ ಎನ್ನಲಾಗುತ್ತಿದೆ. ಸದ್ಯ ಸಿಂಧಿಯಾ ಅವರು ನವದೆಹಲಿಯಲ್ಲಿದ್ದು ಕಾಂಗ್ರೆಸ್ ವರಿಷ್ಠರು ಅವರ ಮನ ಒಲಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.