ಕಾಣೆಯಾದ ದನದ ವಿವರ ಕೇಳಿದ್ದಕ್ಕೆ ಕೈಯ್ಯನ್ನೇ ಕತ್ತರಿಸಿದರು
Team Udayavani, Sep 4, 2018, 6:00 AM IST
ರೈಸನ್: ಕಳೆದು ಹೋದ ದನ ಎಲ್ಲಿ ಎಂದು ಕೇಳಿದ್ದಕ್ಕೆ ಕೈ ಕತ್ತರಿಸಿದ ಘಟನೆ ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ರೈಸನ್ ಜಿಲ್ಲೆಯ ಪಿಪಲ್ವಲಿ ಗ್ರಾಮದಲ್ಲಿ ಶನಿವಾರ ಕಲ್ಲು ಸಾಹು ಎಂಬಾತ ನಾಪತ್ತೆಯಾಗಿದ್ದ ತನ್ನ ದನವನ್ನು ಹುಡುಕುತ್ತಾ ಸತ್ತು ಯಾದವ್ ಎಂಬಾತ ಮನೆಗೆ ತೆರಳಿದ್ದ. ಯಾದವ್ ಕಲ್ಲು ಸಾಹುವಿನ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲ. ಬದಲಾಗಿ ದಬಾಯಿಸಿದ. ಇದರಿಂದಾಗಿ ಮಾತಿಗೆ ಮಾತು ಬೆಳೆಯಿತು. ಅದೇ ಸಂದರ್ಭದಲ್ಲಿ ಸತ್ತು ಯಾದವ್ನ ಕುಟುಂಬ ಸದಸ್ಯರು ಕಲ್ಲು ಸಾಹುವನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದರು.
ಜತೆಗೆ ಕತ್ತಿಯಿಂದ ಕೈ ಕತ್ತರಿಸಿ, ಮತ್ತೂಂದು ಕೈಗೆ ಭಾರಿ ಪ್ರಮಾಣದಲ್ಲಿ ಗಾಯ ಮಾಡಿದರು. ಸುದ್ದಿ ತಿಳಿದ ಸಾಹುವಿನ ಬಂಧು, ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ. ಸ್ಥಳೀಯ ವೈದ್ಯರು ಭೋಪಾಲ ಆಸ್ಪತ್ರೆಗೆ ಸಾಹುವನ್ನು ದಾಖಲಿಸುವಂತೆ ಸೂಚಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಯಾದವ್ ಕುಟುಂಬದ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.