ಮಹಾರಾಷ್ಟ್ರದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೇ ಬಹಿಷ್ಕಾರ!
Team Udayavani, Jul 14, 2017, 3:10 AM IST
ಮುಂಬಯಿ: ಜಾತಿ ಆಧಾರದಲ್ಲಿ ನಡೆಯುವ ಸಾಮಾಜಿಕ ಬಹಿಷ್ಕಾರದ ವಿರುದ್ಧ ಕಾಯ್ದೆ ರೂಪಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ಸಾಮಾಜಿಕ ಬಹಿಷ್ಕಾರ ವಿರೋಧಿ ಮಸೂದೆ’ಗೆ ಅಂಕಿತ ಹಾಕಿದ್ದು, ಇತ್ತ ಕೇಂದ್ರ ಸರಕಾರದಿಂದಲೂ ಹಸಿರು ನಿಶಾನೆ ಪಡೆದಿರುವ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರ, ಕಾಯ್ದೆ ಜಾರಿಗೆ ಸಿದ್ಧತೆ ನಡೆಸಿದೆ. ಸಾಮಾಜಿಕ ಬಹಿಷ್ಕಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಕುರಿತ ಮಸೂದೆಗೆ ಕಳೆದ ವರ್ಷ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಡೆದ ಬಜೆಟ್ ಅಧಿವೇಶನದ ವೇಳೆ ಸಂಪುಟದ ಅನುಮೋದನೆ ದೊರೆತಿತ್ತು. ಅನಂತರ ಮಸೂದೆಗೆ ಕೇಂದ್ರದ ಒಪ್ಪಿಗೆ ಪಡೆದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಲಾಗಿತ್ತು.