ಸಾವಿರ ದಾಟಿದ ಸೋಂಕುಪೀಡಿತರು
ಮಹಾರಾಷ್ಟ್ರ, ಕೇರಳದಲ್ಲೇ ಅತಿ ಹೆಚ್ಚು ; ಕೇರಳದಲ್ಲಿ 200 ಮೀರಿದ ಸಂಖ್ಯೆ
Team Udayavani, Mar 30, 2020, 6:15 AM IST
ಹೊಸದಿಲ್ಲಿ, /ಬೆಂಗಳೂರು: ದೇಶಾದ್ಯಂತ ಕೋವಿಡ್-19 ಪೀಡಿತರ ಸಂಖ್ಯೆ ಒಂದು ಸಾವಿರ ಮೀರಿದೆ. ಕಳೆದ 24 ತಾಸುಗಳಲ್ಲಿ ಮತ್ತೆ 100ಕ್ಕೂ ಹೆಚ್ಚು ಪ್ರಕರಣಗಳು ದೃಢ ಪಟ್ಟಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಇದುವರೆಗೆ ಒಟ್ಟು 1,079 ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 28 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 97 ಮಂದಿ ಚೇತರಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ರವಿವಾರ ಒಂದೇ ದಿನ ತಲಾ 20 ಪ್ರಕರಣಗಳು ಪತ್ತೆಯಾಗಿ ದ್ದರೆ, ಉಡುಪಿಯ ಇಬ್ಬರಲ್ಲಿ ಸೋಂಕು ದೃಢವಾಗಿದೆ. ಕರ್ನಾಟಕದಲ್ಲಿ ಪೀಡಿತರ ಸಂಖ್ಯೆ83ಕ್ಕೆ ಏರಿದೆ. ಅತ್ತ ತಮಿಳುನಾಡು, ಗುಜರಾತ್, ಉತ್ತರ ಪ್ರದೇಶದಲ್ಲೂ ಸೋಂಕುಪೀಡಿತರ ಸಂಖ್ಯೆ ಏರಿದೆ.
ನಿಮ್ಹಾನ್ಸ್ ಟೋಲ್ ಫ್ರೀ ಸಂಖ್ಯೆ 080-46110007
ಕೋವಿಡ್-19 ಹಿನ್ನೆಲೆಯಲ್ಲಿ ಜನ ಮನೆಯಲ್ಲೇ ಉಳಿದಿದ್ದು, ಕೆಲವರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಇವರ ಸಮಸ್ಯೆಗಳಿಗೆ ಪರಿಹಾರ ನೀಡಲು ಬೆಂಗಳೂರಿ ನಲ್ಲಿರುವ ನಿಮ್ಹಾನ್ಸ್ ಮುಂದಾಗಿದೆ. ಯಾವುದೇ ಸಂದೇಹಗಳಿದ್ದರೂ ಸಂಸ್ಥೆಯ 080- 46110007 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸು ವಂತೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಡಿಸಿ, ಎಸ್ಪಿಗಳೇ ಹೊಣೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ವಲಸಿಗರು ತಮ್ಮ ಊರುಗಳತ್ತ ತೆರಳುತ್ತಿದ್ದು, ಇದನ್ನು ತಡೆಯುವಂತೆ ಮತ್ತು ಅವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೇಂದ್ರವು ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಹಳ್ಳಿಗಳಿಗೆ ಸೋಂಕು ಪ್ರಸರಣ ಆಗುವುದನ್ನು ತಡೆಯಲು ವಲಸಿಗರನ್ನು ಗಡಿಗಳಲ್ಲೇ ತಡೆದು ಆಶ್ರಯ ಮತ್ತು ಆಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಇದನ್ನು ತಡೆಗಟ್ಟದಿ ದ್ದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೇ ಹೊಣೆಯಾಗಿ ರುತ್ತಾರೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಒಂದು ತಿಂಗಳು ಬಾಡಿಗೆ ಕೇಳಬೇಡಿ
ಅತಂತ್ರ ಕಾರ್ಮಿಕರತ್ತ ಕೇಂದ್ರ ಸಹಾಯ ಹಸ್ತ ಚಾಚಿದ್ದು, ಅವರಿಂದ ಬಾಡಿಗೆ ಕೇಳದಂತೆ ಮನೆ ಮಾಲಕರಿಗೆ ಸೂಚನೆ ನೀಡಿದೆ. ಜತೆಗೆ ಉದ್ಯೋಗದಾತರೂ ವೇತನ ಕಡಿತ ಮಾಡಬಾರದು ಎಂದಿದೆ.
ನರೇಗಾ ಕೂಲಿ
ಕಾರ್ಮಿಕರು ಕಂಗಾಲು
ಕೋವಿಡ್-19ದಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಕೇಂದ್ರ ಸರಕಾರವು ನರೇಗಾ ಕಾರ್ಮಿಕರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಆದರೆ 2 ವರ್ಷಗ ಳಿಂದ ರಾಜ್ಯದ ನರೇಗಾ ಕಾರ್ಮಿಕರಿಗೆ ನೀಡಬೇಕಾಗಿರುವ 1,744 ಕೋ.ರೂ. ಕೂಲಿ ಹಣವನ್ನು ಇನ್ನೂ ಅದು ನೀಡಿಲ್ಲ. ರಾಜ್ಯ ಸರಕಾರವೂ ನರೇಗಾ ಕಾರ್ಮಿಕರ 755 ಕೋ.ರೂ. ಕೂಲಿ ಹಣ ಬಾಕಿ ಇರಿಸಿಕೊಂಡಿದೆ. 2018-19ನೇ ಸಾಲಿನ 32.81 ಕೋ.ರೂ. ಕೂಲಿ ಮತ್ತು 119.17 ಕೋ.ರೂ. ಸಾಮಗ್ರಿ ಖರೀದಿ ಹಣ, 2019-20ನೇ ಸಾಲಿನ 53.61 ಕೋ.ರೂ. ಕೂಲಿ ಹಣ ಹಾಗೂ 549.81 ಕೋ.ರೂ. ಸಾಮಗ್ರಿ ಹಣ ರಾಜ್ಯ ಸರಕಾರ ಬಾಕಿಯಿರಿಸಿದೆ.