ಖಾಸಗಿತನದ ಮಹತ್ವ ರಕ್ಷಿಸಬೇಕಿದೆ: ಸುಪ್ರೀಂ
Team Udayavani, Aug 3, 2017, 8:55 AM IST
ಹೊಸದಿಲ್ಲಿ: ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು ಹಾಲಿ ತಾಂತ್ರಿಕ ದಿನಮಾನಗಳಲ್ಲಿ ಸುರಕ್ಷತೆಯಿಂದ ಇರಿಸಿಕೊಳ್ಳುವುದೇ ಸವಾಲಾಗಿದೆ ಎಂದಿದೆ ಸುಪ್ರೀಂಕೋರ್ಟ್. ಬುಧವಾರ ನಡೆದ ಅಂತಿಮ ವಿಚಾರಣೆ ವೇಳೆ ಸಾರ್ವಜನಿಕವಾಗಿ ಸಲ್ಲಿಕೆಯಾಗಿರುವ ಖಾಸಗಿ ಮಾಹಿತಿ ರಕ್ಷಣೆಗೆ ಕಠಿಣಾತಿ ಕಠಿಣ ರಕ್ಷಣಾ ನೀತಿಗಳನ್ನು ಜಾರಿಗೊಳಿ ಸುವುದೇ ಅಂತಿಮ ಪರಿಹಾರ ಮಾರ್ಗ ಎಂದು ಅಭಿಪ್ರಾಯ ಪಟ್ಟಿದೆ. ಯಾವ ಕಾರಣಕ್ಕಾಗಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇದು ನಿಜಕ್ಕೂ ಕಳವಳಕಾರಿ. ತೀರಾ ತಾಂತ್ರಿಕ ದಿನಮಾನಗಳಲ್ಲಿ ಖಾಸಗಿತನ ರಕ್ಷಣೆಗೆ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಖಾಸಗಿತನದ ಪ್ರಾಮುಖ್ಯತೆಯನ್ನು ಕಾಯ್ದುಕೊಳ್ಳಲೇಬೇಕಾಗಿದೆ ಎಂದಿದೆ ನ್ಯಾಯಪೀಠ.
6 ದಿನಗಳಿಂದ ಆಧಾರ್ ಕಡ್ಡಾಯದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ 9 ನ್ಯಾಯಮೂರ್ತಿಗಳ ಪೀಠದ ಎದುರು ನಡೆಯುತ್ತಿದ್ದ ವಿಚಾರಣೆ ಬುಧವಾರ ಮುಕ್ತಾಯದ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ. ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿದೆ. ಆ.27 ಅಥವಾ ಅದಕ್ಕಿಂತ ಮೊದಲು ತೀರ್ಪು ನೀಡುವ ಸಾಧ್ಯತೆ ಇದೆ. ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯವಾದಿಗಳಾದ ಕಪಿಲ್ ಸಿಬಲ್, ಅರವಿಂದ್ ದಾತಾರ್ ಸೇರಿ ಪ್ರಮುಖರು ವಾದಿಸಿದ್ದರು.