ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಎಂಜಿನಿಯರ್ ಉಗ್ರ ಲಿಬಿಯಾದಲ್ಲಿ ಸಾವು?
Team Udayavani, Jun 7, 2021, 8:15 AM IST
ಕಲ್ಲಿಕೋಟೆ: ಬೆಂಗಳೂರಿನ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೇರಳದ ಕಲ್ಲಿಕೋಟೆಯ ಅಬು ಬಕ್ರ್ ಎಂಬಾತ ಲಿಬಿಯಾದಲ್ಲಿ ನಡೆದ ಹೋರಾಟದಲ್ಲಿ ಅಸುನೀಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಉಗ್ರ ಸಂಘಟನೆ ಐಎಸ್ ತನ್ನ ದಾಖಲೆಗಳಲ್ಲಿ ಹೇಳಿಕೊಂಡಿದೆ. ಈ ವಿಚಾರವನ್ನು ದೇಶದ ತನಿಖಾ ಸಂಸ್ಥೆಗಳು ಇನ್ನಷ್ಟೇ ದೃಢಪಡಿಸಬೇಕಾಗಿದೆ.
“ನಿಮ್ಮ ಹುತಾತ್ಮರನ್ನು ತಿಳಿದುಕೊಳ್ಳಿ’ ಎಂಬ ಉಗ್ರ ಸಂಘಟನೆಯ ಶೀರ್ಷಿಕೆಯ ದಾಖಲೆಗಳಲ್ಲಿ ಅಬು ಬಕ್ರ್ ನ ಹೆಸರು ಉಲ್ಲೇಖಗೊಂಡಿದೆ. ಮೂಲತಃ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಆತ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದ. ಅನಂತರ ದುಬೈಗೆ ತೆರಳಿದ್ದ. ಐಸಿಸ್ ದಾಖಲೆಗಳ ಪ್ರಕಾರ ಆತ್ಮಹತ್ಯಾ ಬಾಂಬರ್ ಆಗಿರುವ ಆತ ಆಫ್ರಿಕಾ ಖಂಡದ ದೇಶದಲ್ಲಿ ಸಾವಿಗೀಡಾಗಿದ್ದಾನೆ. ಆತನ ನಿಜವಾದ ಹೆಸರನ್ನೂ ಉಲ್ಲೇಖೀಸಲಾಗಿಲ್ಲ.
ಪಾಸ್ಪೋರ್ಟ್ನಲ್ಲಿ ಕ್ರಿಶ್ಚಿಯನ್ ಹೆಸರು ಇದ್ದ ಕಾರಣ ಆತನನ್ನು ಲಿಬಿಯಾಕ್ಕೆ ತೆರಳಲು ಸೂಚಿಸಲಾಗಿತ್ತು. 3 ತಿಂಗಳ ಬಳಿಕ ಅತ ಕೊಲ್ಲಲ್ಪಟ್ಟ ಎಂದು ಸಂಘಟನೆ ಹೇಳಿ ಕೊಂಡಿದೆ. ಸಿರಿಯಾ ಮತ್ತು ಅಫ್ಗಾನ್ ನಲ್ಲಿ ಅವರ ನೆಲೆಗಳ ಮೇಲೆ ದಾಳಿ ನಡೆದ ಬಳಿಕ ಆಫ್ರಿಕಾ ಖಂಡಕ್ಕೆ ಉಗ್ರರು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿರುವ ಸಾಧ್ಯತೆಗಳಿವೆ ಎಂದು ಭದ್ರತಾ ಕ್ಷೇತ್ರದ ವಿಶ್ಲೇಷಕರು ಹೇಳಿದ್ದಾರೆ.